ಮೋದಿ ಪ್ರಮಾಣ ವಚನಕ್ಕೆ ಚುನಾವಣಾ ಹಿಂಸೆಯಲ್ಲಿ ಮೃತಪಟ್ಟ ಬಿಜೆಪಿಗರ ಕುಟುಂಬಗಳಿಗೆ ಆಹ್ವಾನ

ಹೊಸದಿಲ್ಲಿ : ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಹಿಂಸಾಚಾರದಲ್ಲಿ ಮೃತರಾದ 50 ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪಕ್ಷ ಆಹ್ವಾನಿಸಿದೆ.
ಇತ್ತೀಚಿನ ಲೋಕಸಭಾ ಚುನಾವಣೆ ಸಹಿತ ಕಳೆದ ಆರು ವರ್ಷಗಳಲ್ಲಿ ಬಂಗಾಳದಲ್ಲಿ ಚುನಾವಣಾ ಹಿಂಸಾಚಾರದಲ್ಲಿ ಕನಿಷ್ಠ 51 ಬಿಜೆಪಿ ಕಾರ್ಯಕರ್ತರು ಬಲಿಯಾಗಿದ್ದಾರೆಂದು ಹೇಳಲಾಗಿದೆ.
ಹೀಗೆ ಪ್ರಧಾನಿ ಪ್ರಮಾಣ ವಚನ ಸ್ವೀಕಾರಕ್ಕೆ ಆಹ್ವಾನ ಪಡೆದವರಲ್ಲಿ ಮಿಡ್ನಾಪುರದ ದಿ. ಮನು ಹನ್ಸದಾ ಎಂಬವರ ಪುತ್ರ ಕೂಡ ಸೇರಿದ್ದಾರೆ. ''ನನ್ನ ತಂದೆಯನ್ನು ತೃಣಮೂಲ ಗೂಂಡಾಗಳು ಸಾಯಿಸಿದ್ದಾರೆ. ನಾವು ದಿಲ್ಲಿಗೆ ಹೋಗುತ್ತಿರುವುದು ಖುಷಿ ನೀಡಿದೆ. ಈಗ ನಮ್ಮ ಪ್ರದೇಶದಲ್ಲಿ ಶಾಂತಿ ನೆಲೆಸಿದೆ,'' ಎಂದು ಅವರು ಹೇಳಿದ್ದಾರೆ.
ಮಿಡ್ನಾಪುರ್ ದಲ್ಲಿ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ತೃಣಮೂಲ ಅಭ್ಯರ್ಥಿ ಮಾನಸ್ ಭುನಿಯಾ ಅವರನ್ನು ಸೋಲಿಸಿದ್ದರು. ಕಳೆದ ಚುನಾವಣೆ ಯಲ್ಲಿ ಬಂಗಾಳದಲ್ಲಿ ಕೇವಲ 2 ಸ್ಥಾನಗಳಿಸಿದ್ದ ಬಿಜೆಪಿ ಈ ಬಾರಿ 42 ಲೋಕಸಭಾ ಕ್ಷೇತ್ರಗಳ ಪೈಕಿ 18ರಲ್ಲಿ ಗೆದ್ದು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸವಾಲೊಡ್ಡಿದೆ. ಸೋಮವಾರವಷ್ಟೇ ಇಬ್ಬರು ತೃಣಮೂಲ ಶಾಸಕರು ಹಾಗೂ 50 ತೃಣಮೂಲ ಕೌನ್ಸಿಲರುಗಳನ್ನು ಬಿಜೆಪಿಗೆ ಸೇರಿಸಿ ಮಮತಾ ಬ್ಯಾನರ್ಜಿಯ ಪಕ್ಷಕ್ಕೆ ದಿಲೀಪ್ ಘೋಷ್ ದೊಡ್ಡ ಹೊಡೆತ ನೀಡಿದ್ದಾರೆ.