ಅಲ್ಪಸಂಖ್ಯಾತ ಬಾಹುಳ್ಯದ ಜಿಲ್ಲೆಗಳಲ್ಲಿ ಬಿಜೆಪಿ ಉತ್ತಮ ಸಾಧನೆ: ಶೇ.50ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು

ಹೊಸದಿಲ್ಲಿ, ಮೇ 29: 2008ರಲ್ಲಿ ಅಂದಿನ ಯುಪಿಎ ಸರಕಾರ ಗುರುತಿಸಿದ್ದ 90 ಅಲ್ಪಸಂಖ್ಯಾತ ಬಾಹುಳ್ಯದ ಜಿಲ್ಲೆಗಳ ಶೇ.50ರಷ್ಟು ಲೋಕಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಗಮನಾರ್ಹ ಪ್ರಮಾಣದ ಅಲ್ಪಸಂಖ್ಯಾತ ಜನಸಂಖ್ಯೆಯ ಜೊತೆ ಸಾಮಾಜಿಕ- ಆರ್ಥಿಕ ಸ್ಥಿತಿ ಹಾಗೂ ಮೂಲ ಸೌಕರ್ಯ ಸೂಚಕದಲ್ಲೂ ಈ ಜಿಲ್ಲೆಗಳು ರಾಷ್ಟ್ರೀಯ ಸರಾಸರಿಗಿಂತ ಕೆಳಮಟ್ಟದಲ್ಲಿವೆ. ಇಂತಹ 79 ಜಿಲ್ಲೆಗಳಲ್ಲಿ ಬಿಜೆಪಿ ಗರಿಷ್ಟ ಸಂಖ್ಯೆಯ, ಅಂದರೆ 41 ಸ್ಥಾನಗಳಲ್ಲಿ ಗೆದ್ದಿದ್ದರೆ(ಕಳೆದ ಬಾರಿಗಿಂತ 7 ಸ್ಥಾನ ಅಧಿಕ), ಕಾಂಗ್ರೆಸ್ ಕೇವಲ 6 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ(ಕಳೆದ ಬಾರಿ 12). ಈ ಬಾರಿ ಮುಸ್ಲಿಮರು ಸಂಪೂರ್ಣವಾಗಿ ಒಂದು ಪಕ್ಷ ಅಥವಾ ಒಬ್ಬ ಅಭ್ಯರ್ಥಿಯ ಪರ ಮತ ಚಲಾಯಿಸಿಲ್ಲ ಎಂದು ವಿಶ್ಲೇಷಿಸಲಾಗಿದೆ.
ಇನ್ನೊಂದೆಡೆ, ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 27 ಮುಸ್ಲಿಮ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಆದರೆ ಬಿಜೆಪಿಯಿಂದ ಕಣಕ್ಕೆ ಇಳಿದಿರುವ ಆರೂ ಅಭ್ಯರ್ಥಿಗಳೂ ಸೋಲುಂಡಿದ್ದಾರೆ. ಟಿಎಂಸಿಯ 5, ಕಾಂಗ್ರೆಸ್ನ 4, ಸಮಾಜವಾದಿ ಪಕ್ಷ, ಬಿಎಸ್ಪಿ, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ನ ತಲಾ 3, ಎಐಎಂಐಎಂನ 2, ಎನ್ಸಿಪಿ, ಸಿಪಿಐ(ಎಂ) ಮತ್ತು ಎಐಯುಡಿಎಫ್ನ ತಲಾ ಒಬ್ಬರು ಮುಸ್ಲಿಂ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.
ಪಶ್ಚಿಮ ಬಂಗಾಳದ ಅಲ್ಪಸಂಖ್ಯಾತ ಬಾಹುಳ್ಯದ ಜಿಲ್ಲೆಗಳಲ್ಲಿ ಬಿಜೆಪಿಗೆ ಅತೀ ಹೆಚ್ಚಿನ ಲಾಭವಾಗಿದ್ದು 18 ಸ್ಥಾನದಲ್ಲಿ ಗೆದ್ದಿದೆ. ಉತ್ತರಪ್ರದೇಶದಲ್ಲಿ ರಾಂಪುರ, ನಗೀನಾ, ಮೊರಾದಾಬಾದ್, ಸಂಭಾಲ್ ಮತ್ತು ಅಮ್ರೋಹ ಕ್ಷೇತ್ರಗಳಲ್ಲಿ ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಉತ್ತಮ ಸಾಧನೆ ತೋರಿದ್ದರೂ ಮಹಾಘಟಬಂಧನದ ಅಭ್ಯರ್ಥಿಗಳು ಇಲ್ಲಿ ಜಯ ಸಾಧಿಸಿದ್ದಾರೆ.
ರಾಂಪುರದಲ್ಲಿ ಸುಮಾರು ಶೇ.50ರಷ್ಟು ಮುಸ್ಲಿಂ ಮತದಾರರಿದ್ದು ಇಲ್ಲಿ ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಅಝಂ ಖಾನ್ ಬಿಜೆಪಿ ಅಭ್ಯರ್ಥಿ, ಮಾಜಿ ಸಿನೆಮಾ ನಟಿ ಜಯಪ್ರದಾರನ್ನು 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದ್ದಾರೆ.