ಶಾ, ಪ್ರಸಾದ್ ರಾಜ್ಯಸಭಾ ಸದಸ್ಯತ್ವ ಅಂತ್ಯ

ಹೊಸದಿಲ್ಲಿ, ಮೇ 29: ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್ ಮತ್ತು ಸ್ಮೃತಿ ಇರಾನಿ ಹಾಗೂ ಡಿಎಂಕೆ ನಾಯಕಿ ಕಣಿಮೋಳಿ ಲೋಕಸಭೆಗೆ ಆಯ್ಕೆಯಾಗಿರುವ ಕಾರಣ ಅವರ ರಾಜ್ಯಸಭೆಯ ಸದಸ್ಯತ್ವ ಅಂತ್ಯಗೊಂಡಿದೆ ಎಂದು ರಾಜ್ಯಸಭೆಯ ಸಚಿವಾಲಯ ಬುಧವಾರ ತಿಳಿಸಿದೆ.
ಇದೀಗ ತನ್ನ ಪಾಲಿನ ಮೂರು ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಎಲ್ಜೆಪಿ ಪಕ್ಷದ ಮುಖ್ಯಸ್ಥ ರಾಮ್ವಿಲಾಸ್ ಪಾಸ್ವಾನ್ಗೆ ಬಿಟ್ಟುಕೊಡಲು ಬಿಜೆಪಿ ನಿರ್ಧರಿಸಿದೆ. ಪಾಸ್ವಾನ್ಗೆ ಮೋದಿ ಸಚಿವ ಸಂಪುಟದಲ್ಲಿ ಸಚಿವ ಹುದ್ದೆ ದೊರಕುವ ನಿರೀಕ್ಷೆಯಿದೆ.ಅವರು ಬಿಹಾರದಿಂದ ರಾಜ್ಯಸಭೆಗೆ ಆಯ್ಕೆಯಾಗುವ ಸಾಧ್ಯತೆಯಿದೆ. ರವಿಶಂಕರ್ ಪ್ರಸಾದ್ ತೆರವುಗೊಳಿಸುವ ಬಿಹಾರ ರಾಜ್ಯಸಭೆ ಸ್ಥಾನಕ್ಕೆ ಪಾಸ್ವಾನ್ ಆಯ್ಕೆಯಾಗುವ ನಿರೀಕ್ಷೆಯಿದೆ.
ಗುಜರಾತ್ನಿಂದ ಶಾ ಮತ್ತು ಇರಾನಿ ತೆರವುಗೊಳಿಸಿರುವ ರಾಜ್ಯಸಭೆ ಸ್ಥಾನಗಳಿಗೆ ಸಾರ್ವತ್ರಿಕ ಚುನಾವಣೆಯಲ್ಲಿ ಸೋತಿರುವ , ಆದರೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲಿರುವ ಪ್ರಭಾವೀ ಮುಖಂಡರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಕಣಿಮೋಳಿ ತಮಿಳುನಾಡಿನ ತೂತುಕುಡಿ ಸಂಸದೀಯ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.