ಮೋದಿ ಸಂಪುಟದಲ್ಲಿ ಜೆಡಿಯು ಇರುವುದಿಲ್ಲ : ನಿತೀಶ್ ಕುಮಾರ್ ಅಚ್ಚರಿಯ ಹೇಳಿಕೆ

ಹೊಸದಿಲ್ಲಿ, ಮೇ 30: ನಾಟಕೀಯ ಬೆಳವಣಿಗೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರದ ಭಾಗವಾಗಲು ನಿರಾಕರಿಸಿರುವ ಜೆಡಿಯು, ಕೇವಲ ಒಂದು ಕ್ಯಾಬಿನೆಟ್ ದರ್ಜೆಯ ಸ್ಥಾನ ನೀಡಿರುವುದು ತಮಗೆ ಸ್ವೀಕರಾರ್ಹವಲ್ಲ ಎಂದು ಹೇಳಿದೆ. ರಾಷ್ಟ್ರಪತಿ ಭವನದ ಅಂಗಣದಲ್ಲಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸುವುದಕ್ಕಿಂತ ಮುನ್ನ ಬಿಹಾರ್ ಮುಖ್ಯಮಂತ್ರಿ ಹಾಗೂ ಜೆಡಿಯು ವರಿಷ್ಠ ನಿತೀಶ್ ಕುಮಾರ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜೆಡಿಯು ಆರಂಭದಲ್ಲಿ ತನ್ನ ರಾಜ್ಯಸಭಾ ನಾಯಕ ಆರ್ಸಿಪಿ ಸಿಂಗ್ ಹೆಸರನ್ನು ಕ್ಯಾಬಿನೆಟ್ ದರ್ಜೆಯ ಸ್ಥಾನಕ್ಕೆ ಅಂತಿಮಗೊಳಿಸಿತ್ತು. ಆದರೆ, ಹೆಚ್ಚು ಕ್ಯಾಪಿನೆಟ್ ದರ್ಜೆಯ ಸ್ಥಾನಗಳನ್ನು ನೀಡುವ ಕುರಿತಂತೆ ಬಿಜೆಪಿಯೊಂದಿಗಿನ ಮಾತುಕತೆ ಮುರಿದುಬಿದ್ದ ಹಿನ್ನೆಲೆಯಲ್ಲಿ ಜೆಡಿಯು ತನ್ನ ನಿರ್ಧಾರ ಬದಲಾಯಿಸಿತು. ಬಿಜೆಪಿ ನೀಡಿದ ಆಹ್ವಾನ ಸ್ವೀಕಾರ್ಹವಲ್ಲ. ನಾವು ಎನ್ಡಿಒಯೊಂದಿಗೆ ಇದ್ದೇವೆ. ಆದರೆ, ಸರಕಾರದ ಜೊತೆ ಸೇರಲಾರೆವು ಎಂದು ನಿತೀಶ್ ಕುಮಾರ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಪಕ್ಷಕ್ಕೆ ಬಿಜೆಪಿ ಕೇವಲ ಒಂದು ಕ್ಯಾಬಿನೆಟ್ ದರ್ಜೆಯ ಹುದ್ದೆಯ ಆಹ್ವಾನ ನೀಡಿರುವುದರಿಂದ ಜೆಡಿಯು ಅಸಮಾಧಾನ ಹೊಂದಿದೆ. ಆದುದರಿಂದ ನರೇಂದ್ರ ಮೋದಿ ಅವರ ಸರಕಾರದ ಭಾಗವಾಗುವುದು ಸಮರ್ಥನೀಯವಲ್ಲ ಎಂದು ಜೆಡಿಯು ಭಾವಿಸಿದೆ ಎಂದು ಮೂಲಗಳು ತಿಳಿಸಿವೆ. ಬಿಹಾರದಲ್ಲಿ ಜೆಡಿಯುನ 16 ಸಂಸದರು ಹಾಗೂ ಬಿಜೆಪಿಯ 17 ಸಂಸದರು ಇದ್ದಾರೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಎಲ್ಜೆಪಿಯೊಂದಿಗೆ ಈ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದವು.