ಜಗನ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರೀತಿ, ಸಹಕಾರದ ಮಂತ್ರ ಪಠಿಸಿದ ಕೆಸಿಆರ್

ಅಮರಾವತಿ, ಮೇ 31: ಆಂಧ್ರ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ವೈಎಸ್ಆರ್ ಕಾಂಗ್ರೆಸ್ ಮುಖಂಡ ಜಗನ್ಮೋಹನ ರೆಡ್ಡಿ ಗುರುವಾರ ಪ್ರಮಾಣವಚನ ಸ್ವೀಕರಿಸಿದರು. ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ಸೇರಿದಂತೆ ಹಲವು ಮಂದಿ ಗಣ್ಯರು ಸಮಾರಂಭಕ್ಕೆ ಸಾಕ್ಷಿಯಾದರು.
ಸಮಾರಂಭದಲ್ಲಿ ಪ್ರೀತಿ ಮತ್ತು ಸಹಕಾರದ ಮಂತ್ರ ಪಠಿಸಿದ ಕೆಸಿಆರ್, ಆಂಧ್ರದ ಹೊಸ ಮುಖ್ಯಮಂತ್ರಿಗೆ ಎಲ್ಲ ಸಹಕಾರದ ಭರವಸೆ ನೀಡಿದರು. ಎರಡು ತೆಲುಗು ರಾಜ್ಯಗಳು, ಮುಂದುವರಿಯಲು ಪರಸ್ಪರ ಕತ್ತಿ ಮಸೆಯುವ ಬದಲು, ಕೈಜೋಡಿಸಬೇಕಿದೆ ಎಂದು ಸೂಚ್ಯವಾಗಿ ಹೇಳಿದರು.
"ತೆಲುಗು ಜನರ ಬದುಕಿನಲ್ಲಿ ಇದು ಅದ್ಭುತ ಕ್ಷಣ. ಎರಡೂ ರಾಜ್ಯಗಳು ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಪರಸ್ಪರ ರಾಜ್ಯಗಳ ಜನ ಮತ್ತು ಸುತ್ತಮುತ್ತಲ ಜನ ಪ್ರೀತಿ, ಆತ್ಮೀಯತೆ ಮತ್ತು ಸಹಕಾರದಿಂದ ಇರುವುದು ಮುಖ್ಯ" ಎಂದು ರಾವ್ ಹೇಳಿದರು.
ಎರಡು ಪಕ್ಷಗಳು ಜತೆಯಾಗಿ ನಿರ್ವಹಿಸಬೇಕಾದ ಕಾರ್ಯದ ಬಗ್ಗೆ ಕೂಡಾ ಕೆಸಿಆರ್ ನೂತನ ಸಿಎಂಗೆ ಮನದಟ್ಟು ಮಾಡಿದರು. "ಕೃಷ್ಣಾ ನದಿ ನೀರಿನ ವಿಚಾರದಲ್ಲಿ ಸಮಸ್ಯೆ ಇದೆ. ಎರಡೂ ರಾಜ್ಯಗಳು ಪ್ರತಿ ಹನಿ ನೀರನ್ನು ಕೂಡಾ ಎಚ್ಚರಿಕೆಯಿಂದ ಬಳಸಬೇಕು. ಗೋದಾವರಿಯಲ್ಲಿ ಲಭ್ಯವಿರುವ ನೀರಿನಲ್ಲಿ, ಉಭಯ ರಾಜ್ಯಗಳ ಪ್ರತಿ ಇಂಚು ಜಮೀನು ಕೂಡಾ ಫಲವತ್ತಾಗಬೇಕು. ಈ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡುತ್ತೇವೆ" ಎಂದು ಭರವಸೆ ನೀಡಿದರು.