ಹುತಾತ್ಮ ಯೋಧರ ಮಕ್ಕಳ ಸ್ಕಾಲರ್ ಶಿಪ್ ಹೆಚ್ಚಿಸಿದ ಕೇಂದ್ರ ಸರಕಾರ

ಹೊಸದಿಲ್ಲಿ, ಮೇ 31: ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಬಳಿಕದ ಮೊದಲನೇ ನಿರ್ಧಾರವಾಗಿ ನರೇಂದ್ರ ಮೋದಿ ಅವರು ಕರ್ತವ್ಯದಲ್ಲಿರುವಾಗ ಹುತಾತ್ಮರಾದ ಯೋಧರ ಮಕ್ಕಳ ಸ್ಕಾಲರ್ ಶಿಪ್ನಲ್ಲಿ ಬದಲಾವಣೆ ತಂದಿದ್ದಾರೆ. ಅಲ್ಲದೆ, ಈ ಯೋಜನೆಯಲ್ಲಿ ಪೊಲೀಸರನ್ನು ಕೂಡ ಸೇರ್ಪಡೆಗೊಳಿಸಿದ್ದಾರೆ.
ಮೊದಲ ನಿರ್ಧಾರವನ್ನು ದೇಶವನ್ನು ರಕ್ಷಿಸುತ್ತಿರುವವರಿಗೆ ಅರ್ಪಿಸುತ್ತಿದ್ದೇನೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ‘ರಾಷ್ಟ್ರೀಯ ರಕ್ಷಣಾ ನಿಧಿ’ ಅಡಿಯಲ್ಲಿ ಬರುವ ಪ್ರಧಾನ ಮಂತ್ರಿ ಸ್ಕಾಲರ್ ಶಿಪ್ ಯೋಜನೆಯಲ್ಲಿ ಸ್ಪಷ್ಟ ಬದಲಾವಣೆ ತರುವ ನಿರ್ಧಾರವನ್ನು ಬಹಿರಂಗಪಡಿಸಿದ್ದಾರೆ. ಎರಡನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನರೇಂದ್ರ ಮೋದಿ ಅವರು ‘ರಾಷ್ಟ್ರೀಯ ರಕ್ಷಣಾ ನಿಧಿ’ ಅಡಿಯಲ್ಲಿ ಬರುವ ಸ್ಕಾಲರ್ಶಿಪ್ ಮೊತ್ತವನ್ನು ಏರಿಕೆ ಮಾಡಿದ್ದಾರೆ ಹಾಗೂ ಈ ಯೋಜನೆಯಲ್ಲಿ ರಾಜ್ಯ ಪೊಲೀಸ್ ಸಿಬ್ಬಂದಿಯನ್ನು ಸೇರಿಸಿದ್ದಾರೆ.
ಸ್ಕಾಲರ್ಶಿಪ್ನ ಮೊತ್ತವನ್ನು ಬಾಲಕರಿಗೆ ಶೇ. 25 ಹಾಗೂ ಬಾಲಕಿಯರಿಗೆ ಶೇ. 33 ಏರಿಕೆ ಮಾಡಲಾಗಿದೆ. ಈ ಸ್ಕಾಲರ್ಶಿಪ್ ಯೋಜನೆಯನ್ನು ಭಯೋತ್ಪಾದಕ ಅಥವಾ ನಕ್ಸಲೀಯ ದಾಳಿ ಸಂದರ್ಭ ಹುತಾತ್ಮರಾದ ರಾಜ್ಯ ಪೊಲೀಸ್ ಸಿಬ್ಬಂದಿಗೆ ಕೂಡ ವಿಸ್ತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ಹುತಾತ್ಮರಾದ ತುಕಾರಾಮ್ ಓಂಬ್ಲೆಯಂತವರ ಮಕ್ಕಳಿಗೆ ಸ್ಕಾಲರ್ಶಿಪ್ ದೊರಕಿರಲಿಲ್ಲ. ಮುಂಬೈ ಭಯೋತ್ಪಾದಕ ದಾಳಿ ಸಂದರ್ಭ ಓಂಬ್ಲೆ ಹುತಾತ್ಮರಾಗಿದ್ದರು. ಪ್ರಧಾನಿ ಅವರು ಈ ನಿರ್ಧಾರ ಅಸಮಾನತೆಯನ್ನು ನಿವಾರಿಸಿದೆ ಹಾಗೂ ಭಯೋತ್ಪಾದನೆ ಹಾಗೂ ನಕ್ಸಲರ ವಿರುದ್ಧ ಹೋರಾಡಿ ಹುತಾತ್ಮರಾದ ರಾಜ್ಯ ಪೊಲೀಸ್ ಪಡೆಯ ಕುಟುಂಬಗಳಿಗೆ ಕೂಡ ನೆರವು ನೀಡಲಿದೆ.