ಮಂಗಳೂರು ಕೆಪಿಟಿ ಪ್ರದೇಶದಲ್ಲಿ ನೀರಿನ ಸಮಸ್ಯೆ ಉಲ್ಬಣ: ಬಾವಿಗೆ ಒಸರುತ್ತಿರುವ ಒಳಚರಂಡಿ ತ್ಯಾಜ್ಯನೀರು!

ಮಂಗಳೂರು, ಮೇ 31: ಕರಾವಳಿ ಭಾಗದಲ್ಲಿ ಕೆಲವೆಡೆ ಮಳೆ ಆರಂಭವಾಗಿದೆ. ಆದರೆ ನೀರಿನ ಸಮಸ್ಯೆ ಇನ್ನು ಹೆಚ್ಚಳವಾಗುತ್ತಿದೆ. ಮಂಗಳೂರು ನಗರದ ಒಳಚರಂಡಿಯ ತ್ಯಾಜ್ಯನೀರು ಎರಡು ಬಾವಿಗಳಿಗೆ ಒಸರುತ್ತಿರುವ ಕಾರಣ ಇಲ್ಲಿನ ಕೆಪಿಟಿ ಉದಯನಗರ ಪ್ರದೇಶದಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ.
ಮಂಗಳೂರಿನ ಕೆಪಿಟಿ ಉದಯನಗರ ಸಮೀಪದ 20ಕ್ಕೂ ಹೆಚ್ಚು ಮನೆಗಳಿಗೆ ನೀರು ಸರಬರಾಜು ಮಾಡುವ ಎರಡು ಬಾವಿಗಳಿಗೆ ಕಳೆದ ಮೂರು ವರ್ಷಗಳಿಂದ ಒಳಚರಂಡಿ ನೀರು ಸೇರುತ್ತಿದೆ. ಪರಿಣಾಮ ಈ ಬಾವಿಯಲ್ಲಿ ನೀರಿದ್ದರೂ ಉಪಯೋಗಿಸಲು ಸಾಧ್ಯವಾಗುತ್ತಿಲ್ಲ. ನಗರದಲ್ಲಿ ನೀರಿನ ಸಮಸ್ಯೆ ಉಂಟಾಗಿರುವುದರಿಂದ ಪಾಲಿಕೆ ಪೂರೈಸುವ ನೀರೂ ಲಭ್ಯವಾಗದೇ ಸ್ಥಳೀಯರು ಸಂಕಷ್ಟಕ್ಕೀಡಾಗಿದ್ದಾರೆ.
ಈ ಎರಡೂ ಬಾವಿಗಳಲ್ಲಿ ಸಮೃದ್ಧವಾಗಿ ನೀರಿನ ಒರತೆಯಿದೆ. ಕಡು ಬೇಸಗೆಯಲ್ಲೂ ಇಲ್ಲಿ ನೀರು ಬತ್ತಿದ ಉದಾಹರಣೆ ಇಲ್ಲ. ಈಗಲೂ ಇಲ್ಲಿನ ಎರಡೂ ಬಾವಿಯಲ್ಲಿ ಮೂರು ಅಡಿಗಿಂತಲೂ ಹೆಚ್ಚಿನ ನೀರಿದೆ. ಸ್ಥಳೀಯ 20ಕ್ಕೂ ಹೆಚ್ಚು ಮನೆಯ ಜನರು ಕುಡಿಯಲು, ಬಟ್ಟೆ ಒಗೆಯಲು ಈ ಬಾವಿಗಳ ನೀರು ಉಪಯೋಗಿಸುತ್ತಿದ್ದರು. ಹತ್ತಾರು ಜನರಿಗೆ ಈ ಬಾವಿಗಳ ನೀರೇ ಆಸರೆಯಾಗಿತ್ತು. ಆದರೆ, ಪಕ್ಕದಲ್ಲೇ ಇರುವ ಚರಂಡಿಯ ತ್ಯಾಜ್ಯನೀರು ಕಳೆದ ಮೂರು ವರ್ಷದ ಹಿಂದೆ ಬಾವಿಗೆ ಒಸರಲು ಆರಂಭಿಸಿದೆ.
ಒಳಚರಂಡಿಯಿಂದ ತ್ಯಾಜ್ಯನೀರು ಸೋರಿಕೆಯಾಗಿ ನೇರವಾಗಿ ಬಾವಿಗಳನ್ನು ಸೇರುತ್ತಿದೆ. ಪರಿಣಾಮ ಬಾವಿ ನೀರು ಕಲುಷಿತಗೊಂಡು ಕಪ್ಪು ಬಣ್ಣಕ್ಕೆ ತಿರುಗಿದೆ. ತ್ಯಾಜ್ಯನೀರು ಸೇರಿಕೊಂಡ ಕಾರಣ ಎರಡೂ ಬಾವಿಗಳ ನೀರು ಬಳಕೆ ಸಾಧ್ಯವಾಗುತ್ತಿಲ್ಲ. ಮೇಲ್ಭಾಗದಲ್ಲಿ ಇರುವ ಕೆರೆಯ ನೀರು ಬಾವಿಯ ಪಕ್ಕದಲ್ಲಿ ಹರಿಯುತ್ತಿತ್ತು. ಈಗ ಚರಂಡಿ ತ್ಯಾಜ್ಯ ಹರಿಯುತ್ತಿದೆ. ಇದರಿಂದ ಸೊಳ್ಳೆ ಕಾಟವೂ ಹೆಚ್ಚಾಗಿದೆ.
ಮಂಗಳೂರು ಮಹಾನಗರ ಪಾಲಿಕೆಯಿಂದ ನೀರು ಪೂರೈಕೆಗೆ ರೇಷನಿಂಗ್ ವ್ಯವಸ್ಥೆ ಜಾರಿಗೊಳಿಸಿದ ಬಳಿಕ ಇಲ್ಲಿನ ಜನರಿಗೆ ನೀರಿನ ಕೊರತೆ ಉಂಟಾಗಿದೆ. ಬಾವಿಗಳ ನೀರು ಬಳಕೆಗೆ ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು, ಮನಪಾ ಅಧಿಕಾರಿಗಳು ಒಳಚರಂಡಿ ಸುವ್ಯವಸ್ಥಿತಗೊಳಿಸಿ, ತ್ಯಾಜ್ಯನೀರು ಸೋರಿಕೆ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ಬಾವಿ ನೀರು ಖಾಲಿ ಮಾಡಿ, ಸ್ವಚ್ಛಗೊಳಿಸಿ, ಬಳಕೆಗೆ ಯೋಗ್ಯವಾಗುವಂತೆ ಮಾಡಬೇಕು ಎನ್ನುವುದು ಸ್ಥಳೀಯರ ಆಗ್ರಹ.
ಗಮನಹರಿಸದ ಅಧಿಕಾರಿಗಳು: ಜೀವಜಲ ಮಲಿನಗೊಂಡ ಕಾರಣ ಸ್ಥಳೀಯರು ಎರಡೂ ಬಾವಿಗಳ ನೀರನ್ನು ಖಾಲಿ ಮಾಡಿ, ಶುದ್ಧಜಲ ದೊರೆಯುತ್ತದೆಯೋ ಎಂದು ಪ್ರಯತ್ನ ನಡೆಸಿದ್ದಾರೆ. ಆದರೆ, ತ್ಯಾಜ್ಯ ನೀರು ನಿರಂತರ ಸೋರಿಕೆಯಿಂದ ಈ ಪ್ರಯತ್ನಕ್ಕೆ ಲ ಸಿಕ್ಕಿಲ್ಲ. ಗಟಾರದ ನೀರು ಸೋರಿಕೆ ವಿಷಯವನ್ನು ಜನಪ್ರತಿನಿಧಿಗಳು, ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದರೂ ಪ್ರಯೋಜನ ಆಗಿಲ್ಲ. ಒಂದು ಬಾರಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಗಟಾರ ಪರಿಶೀಲಿಸಿ ತೆರಳಿದವರು ಮತ್ತೆ ಬಂದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನೆ ಪಕ್ಕದ ಬಾವಿಯಲ್ಲಿ ಹಲವು ವರ್ಷಗಳಿಂದ ಸಮೃದ್ಧವಾದ ನೀರಿನ ಒರತೆ ಇದೆ. ಆದರೆ, ಇಲ್ಲಿ ಚರಂಡಿ ನಿರ್ಮಾಣವಾದ ಬಳಿಕ ಸಮಸ್ಯೆ ಕಾಣಿಸಿಕೊಂಡಿದೆ. ಒಳಚರಂಡಿ ನೀರು ಬಾವಿಗಳಿಗೆ ಸೇರ್ಪಡೆಗೊಂಡು ಬಾವಿನೀರು ಬಳಸದಂತಾಗಿದೆ.
-ಮನೋಹರ ದೇವಾಡಿಗ
ಸ್ಥಳೀಯರು







