ಏಕರೂಪ ನಾಗರಿಕ ಸಂಹಿತೆ ರಚನೆಗೆ ಸಮಿತಿ ಬಗ್ಗೆ ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್

ಹೊಸದಿಲ್ಲಿ,ಮೇ 31: ಏಕರೂಪ ನಾಗರಿಕ ಸಂಹಿತೆಯನ್ನು ಸಿದ್ಧಪಡಿಸಲು ನ್ಯಾಯಾಂಗ ಆಯೋಗ ಅಥವಾ ಉನ್ನತ ಮಟ್ಟದ ತಜ್ಞರ ಸಮಿತಿಯೊಂದನ್ನು ರಚಿಸುವಂತೆ ಕೋರಿ ನ್ಯಾಯವಾದಿ ಹಾಗೂ ಬಿಜೆಪಿ ನಾಯಕ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಶುಕ್ರವಾರ ಕೇಂದ್ರ ಮತ್ತು ಕಾನೂನು ಆಯೋಗಕ್ಕೆ ನೋಟಿಸ್ಗಳನ್ನು ಹೊರಡಿಸಿದೆ.
ಎಲ್ಲ ಧರ್ಮಗಳು ಮತ್ತು ಪಂಥಗಳಲ್ಲಿಯ ಅತ್ಯುತ್ತಮ ಪದ್ಧತಿಗಳು,ಶ್ರೀಮಂತ ರಾಷ್ಟ್ರಗಳ ನಾಗರಿಕ ಕಾನೂನುಗಳು ಮತ್ತು ಅಂತರರಾಷ್ಟ್ರೀಯ ನಿರ್ಣಯಗಳನ್ನು ಪರಿಗಣಿಸಿದ ಬಳಿಕ ಸಂಹಿತೆಯನ್ನು ರಚಿಸಬೇಕು ಹಾಗೂ ಸಾರ್ವಜನಿಕ ಚರ್ಚೆಗಾಗಿ ಮತ್ತು ಮರುಮಾಹಿತಿ ಸ್ವೀಕೃತಿಗಾಗಿ ಅದನ್ನು ಕನಿಷ್ಠ 60 ದಿನಗಳ ಅವಧಿಗೆ ಆನ್ಲೈನ್ನಲ್ಲಿ ಲಭ್ಯವಾಗಿಸಬೇಕು ಎಂದು ಅರ್ಜಿದಾರರು ಹೇಳಿದ್ದಾರೆ.
ಪರ್ಯಾಯವಾಗಿ ನ್ಯಾಯಾಲಯವೂ ಸಂವಿಧಾನದ ವಿಧಿ 44ರ ಅನುಗುಣವಾಗಿ ಸಂಹಿತೆಯನ್ನು ಮೂರು ತಿಂಗಳೊಳಗೆ ಸಿದ್ಧಪಡಿಸುವಂತೆ ಕಾನೂನು ಆಯೋಗಕ್ಕೆ ನಿರ್ದೇಶ ನೀಡಬಹುದಾಗಿದೆ ಎಂದೂ ಅರ್ಜಿಯಲ್ಲಿ ಕೋರಲಾಗಿದೆ.
ಪ್ರಜೆಗಳಿಗೆ ಏಕರೂಪ ನಾಗರಿಕ ಸಂಹಿತೆಯನ್ನು ಒದಗಿಸಲು ಸರಕಾರವು ಪ್ರಯತ್ನಿಸಬೇಕು ಎಂದ ಹೇಳುವ ಸಂವಿಧಾನದ ವಿಧಿ 44 ನಾಗರಿಕ ಸಮಾಜದಲ್ಲಿ ಧರ್ಮ ಮತ್ತು ವೈಯಕ್ತಿಕ ಕಾನೂನುಗಳ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಪರಿಗಣಿಸಿರುವುದರಿಂದ ಭ್ರಾತೃತ್ವ,ಏಕತೆ ಮತ್ತು ರಾಷ್ಟ್ರೀಯ ಸಮಗ್ರತೆಯನ್ನು ಉತ್ತೇಜಿಸುವುದು ಅದರ ಧ್ಯೇಯವಾಗಿದೆ. ಅದು ಸಂವಿಧಾನದ ವಿಧಿ 25ರಡಿ ಖಾತರಿಪಡಿಸಲಾಗಿರುವ ಧಾರ್ಮಿಕ ಸ್ವಾತಂತ್ರ್ಯಗಳನ್ನು ಆಕ್ರಮಿಸುವುದಿಲ್ಲ ಎಂದು ಉಪಾಧ್ಯಾಯ ತನ್ನ ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ. ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಜು.8ಕ್ಕೆ ನಿಗದಿಗೊಳಿಸಿದೆ.