ಜೂ.6ರವರೆಗೆ ಹಳೆ ಪಾಸ್ ಬಳಸಿ: ಸಚಿವ ಖಾದರ್
ಶಾಲಾ ಮಕ್ಕಳ ಬಸ್ ಪಾಸ್

ಮಂಗಳೂರು, ಜೂ.1: ಶಾಲಾ ಮಕ್ಕಳಿಗೆ ಸರಕಾರಿ ಬಸ್ಸುಗಳಲ್ಲಿ ನೀಡಲಾಗುವ ಬಸ್ ಪಾಸ್ಗೆ ಸಂಬಂಧಿಸಿ ಜೂನ್ 6ರವರೆಗೆ ಹಳೆ ಪಾಸುಗಳನ್ನೇ ಬಳಸುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಈಗಾಗಲೇ ಶಾಲಾರಂಭಗೊಂಡಿದ್ದರೂ ಬಸ್ ಪಾಸ್ ಸಮಸ್ಯೆ ಇದೆ. ಗ್ರಾಮಾಂತರ ಪ್ರದೇಶಗಳಲ್ಲಿ ಬಹುತೇಕವಾಗಿ ಮಕ್ಕಳು ಸರಕಾರಿ ಬಸ್ಸುಗಳನ್ನು ಉಪಯೋಗಿಸುತ್ತಿದ್ದು, ಅವರಿಗೆ ಜೂನ್ 6ರಿಂದ ಸ್ಮಾರ್ಟ್ ಕಾರ್ಡ್ ಲಭ್ಯವಾಗಲಿದೆ. ಅಲ್ಲಿಯವರೆಗೆ ಹಳೆ ಬಸ್ಸು ಪಾಸ್ಗಳನ್ನೇ ಉಪಯೋಗಿಸಬಹುದು. ಈ ಬಗ್ಗೆ ಸಾರಿಗೆ ಸಚಿವ ಹಾಗೂ ಮುಖ್ಯಮಂತ್ರಿ ಜತೆ ಚರ್ಚಿಸಿುವುದಾಗಿ ಸಚಿವ ಖಾದರ್ ತಿಳಿಸಿದರು.
ಶೇ. 80ರಷ್ಟು ಪಠ್ಯಪುಸ್ತಕ ಪೂರೈಕೆ- ಜೂ.10ರೊಳಗೆ ಪೂರ್ಣ
ದ.ಕ. ಜಿಲ್ಲೆಯಲ್ಲಿ ಶಾಲೆಗಳಲ್ಲಿ ಶೇ. 80ರಷ್ಟು ಪಠ್ಯ ಪುಸ್ತಕಗಳ ವಿತರಣೆ ನಡೆದಿದೆ. ಜೂನ್ 10ರೊಳಗೆ ಪಠ್ಯ ಪುಸ್ತಕಗಳ ವಿತರಣೆ ಸಂಪೂರ್ಣವಾಗಿ ನೆರವೇರಲಿದೆ ಎಂದು ಖಾದರ್ ತಿಳಿಸಿದರು.
ದ.ಕ. ಜಿಲ್ಲೆಯಲ್ಲಿ ಪ್ರಥಮ ಬಾರಿಗೆ 43 ಶಾಲೆಗಳಲ್ಲಿ ಇಂಗ್ಲಿಷ್ ಶಾಲೆಯನ್ನು ಆರಂಭಿಸಲಾಗಿದೆ. ಉತ್ತಮ ಪ್ರೋತ್ಸಾಹ ದೊರಕಿದ್ದು, ಇತರ ಕಡೆಗಳಿಂದಲೂ ಹೆಚ್ಚುವರಿ ಇಂಗ್ಲಿಷ್ ಶಾಲೆಗಳನ್ನು ಆರಂಭಿಸಲು ಬೇಡಿಕೆ ಬಂದಿದೆ. ಹಾಗಾಗಿ ತಾಲೂಕು ಮಟ್ಟದಿಂದ ಹೆಚ್ಚುವರಿ ಬೇಡಿಕೆಗಳನ್ನು ಪಡೆದು ಆದ್ಯತೆ ಮೇರೆಗೆ ಅನುಮತಿ ಪಡೆದು ಶಾಲಾರಂಭಿಸಲು ಪ್ರಯತ್ನಿಸಲಾಗುವುದು.
ರಾಷ್ಟ್ರೀಯ ಮಾಧ್ಯಮ ಶಿಕ್ಷಣ ವ್ಯವಸ್ಥೆಯಡಿ (ಆರ್ಎಂಎಸ್)8 ಹೈಸ್ಕೂಲ್ಗಳಿಗೆ ಒಟ್ಟು 2.89 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಇದೇ ವೇಳೆ ಶಾಲಾ ಕಟ್ಟಡಗಳದುರಸ್ತಿಗೆ ಸಂಬಂಧಿಸಿ ಪ್ರೌಢಶಾಲೆಗಳಿಗೆ 2.41 ಕೋಟಿ ರೂ. ಹಾಗೂ ಹೈಸ್ಕೂಲ್ಗೆ 68 ಲಕ್ಷ ರೂ.ಗಳು ಬಿಡುಗಡೆಯಾಗಿದೆ. ಮಕ್ಕಳಿಗೆ ನೀಡಲಾಗುವ ಶೂ ಮತ್ತು ಸಾಕ್ಸ್ಗೆ ಸಂಬಂಧಿಸಿ ನೇರವಾಗಿ ಶಾಲಾಭಿವೃದ್ದಿ ಸಮಿತಿ ಅಕೌಂಟ್ಗೆ ಅನುದಾನ ಬಿಡುಗಡೆಯಾಗಲಿದೆ. ಅಗತ್ಯಕ್ಕೆ ಸಂಬಂಧಿಸಿ ಶೂ ಅಥವಾ ಸ್ಯಾಂಡಲ್ಸ್ಗಳನ್ನು ಖರೀದಿಸಬಹುದಾಗಿದೆ. ಆದರೆ ಗುಣಮಟ್ಟವನ್ನು ಕಾಯ್ದುಕೊಂಡು ಬ್ರಾಂಡೆಟ್ ಶೂಗಳನ್ನು ಒದಗಿಬೇಕು ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು, ಜಿ.ಪಂ. ಸದಸ್ಯರಾದ ಶಾಹುಲ್ ಹಮೀದ್, ಮಮತಾ ಗಟ್ಟಿ, ಇಬ್ರಾಹಿಂ ಉಪಸ್ಥಿತರಿದ್ದರು.
ಶಾಲೆಗಳಲ್ಲಿ ನೀರಿನ ಸಮಸ್ಯೆ ಇದ್ದಲ್ಲಿ ತಿಳಿಸಿ
ಸದ್ಯ ಜಿಲ್ಲೆಯ ಯಾವುದೇ ಸರಕಾರಿ ಶಾಲೆಗಳಲ್ಲಿ ನೀರಿನ ಸಮಸ್ಯೆಯಿಂದಾಗಿ ಶಾಲಾರಂಭವನ್ನು ಮುಂದೂಡಲಾಗಿಲ್ಲ. ಯಾವುದಾದರೂ ಶಾಲೆಯಲ್ಲಿ ಬಿಸಿಯೂಟ, ಅಕ್ಷರದಾಸೋಹ ಸೇರಿದಂತೆ ನೀರಿನ ಸಮಸ್ಯೆ ಇದ್ದಲ್ಲಿ ತಕ್ಷಣ ಶಾಲೆಯವರು ಸಂಬಂಧಪಟ್ಟವರ ಗಮನಕ್ಕೆ ತಂದಲ್ಲಿ ನೀರು ಒದಗಿಸಲಾಗುವುದು ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.
ಅಂಗನವಾಡಿ ಕಡೆಗಣಿಸಿ ಇಂಗ್ಲಿಷ್ ಮಾಧ್ಯಮ ಆರಂಭಿಸುವುದಿಲ್ಲ
ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸುವುದರಿಂದ ಅಂಗನವಾಡಿಗಳಿಗೆ ತೊಂದರೆಯಾಗಲಿದೆ ಎಂಬ ಆಕ್ಷೇಪಗಳು ಕೇಳಿ ಬರುತ್ತಿವೆ. ಆದರೆ ಯಾವುದೇ ಕಾರಣಕ್ಕೂ ಅಂಗನವಾಡಿಗಳನ್ನು ಕಡೆಗಣಿಸಿ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸಲಾಗುವುದಿಲ್ಲ. ಮುಂದಿನ ವರ್ಷ ಎಲ್ಕೆಜಿ, ಯುಕೆಜಿಗಳನ್ನು ತೆರೆಯುವ ಸಂದರ್ಭ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಮುಂದುವರಿಯಲಾಗುವುದು ಎಂದು ಸಚಿವ ಖಾದರ್ ಸ್ಪಷ್ಟಪಡಿಸಿದರು.
ನೀರಿನ ಸಮಸ್ಯೆ ಎದುರಿಸಲು ಜಿಲ್ಲಾಡಳಿತದಿಂದ ಸಿದ್ಧತೆ
ಮಳೆಯ ಕೊರತೆಯ ಹಿನ್ನೆಲೆಯಲ್ಲಿ ಈಗಾಗಲೇ ಮಂಗಳೂರು ನಗರದಲ್ಲಿ ನೀರಿನ ಸಮಸ್ಯೆ ತಲೆದೋರದಂತೆ ಆರಂಭದಲ್ಲಿಯೇ ಮುಂಜಾಗೃತಾ ಕ್ರಮಕೈಗೊಂಡ ಹಿನ್ನೆಲೆಯಲ್ಲಿ ಇರುವ ನೀರನ್ನು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಜೂನ್ 9ರ ನಂತರ ಮಳೆ ಬಾರದಿದ್ದಲ್ಲಿ ನೀರಿನ ಸಮಸ್ಯೆ ಎದುರಾದರೆ ಅದಕ್ಕೆ ಸಿದ್ಧತೆ ಮಾಡಲಾಗಿದೆ ಎಂು ಸಚಿವ ಯು.ಟಿ.ಖಾದರ್ ತಿಳಿಸಿದರು.







