ಉತ್ತರ ಭಾರತದಲ್ಲಿ ಮನೆಯಿಂದ ಹೊರಗಿಳಿಯದಂತೆ ಜನರಿಗೆ ಎಚ್ಚರಿಕೆ!
ಕಾರಣವೇನು ಗೊತ್ತಾ?

ಹೊಸದಿಲ್ಲಿ, ಜೂ. 1: ಪೂರ್ವ ದಿಲ್ಲಿಯ ಕಾಮನ್ವೆಲ್ತ್ ಗೇಮ್ಸ್ ವಿಲೇಜ್ನ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ 48.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು ಸಾಮಾನ್ಯ ತಾಪಮಾನಕ್ಕಿಂತ 6 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಹವಾಮಾನ ಇಲಾಖೆ ಎನ್ಸಿಆರ್ ಹಾಗೂ ಹಲವು ರಾಜ್ಯಗಳಲ್ಲಿ ‘ರೆಡ್ ಕಲರ್’ ಮುನ್ನೆಚ್ಚರಿಕೆ ನೀಡಿದೆ. ಬಿಸಿಲ ತಾಪ ಹೆಚ್ಚಿರುವುದರಿಂದ ಮನೆಯಿಂದ ಹೊರಗಿಳಿಯದಂತೆ ಸೂಚನೆ ನೀಡಿದೆ. ವಾತಾವರಣದ ಸ್ಥಿತಿಯ ತೀವ್ರತೆ ಸೂಚಿಸಲು ಹವಾಮಾನ ಇಲಾಖೆ ಹಸಿರು, ಹಳದಿ, ಆ್ಯಂಬರ್ ಹಾಗೂ ಕೆಂಪು ಬಣ್ಣವನ್ನು ಬಳಸುತ್ತದೆ. ವಾತಾವಾರಣ ತೀವ್ರ ತಾಪಮಾನದಿಂದ ಕೂಡಿದ್ದರೆ ಕೆಂಪು ಬಣ್ಣವನ್ನು ಬಳಸಲಾಗುತ್ತದೆ.
ಪಂಜಾಬ್, ಹರ್ಯಾಣ, ದಿಲ್ಲಿ, ಪಶ್ಚಿಮ-ಪೂರ್ವ ಉತ್ತರಪ್ರದೇಶ, ರಾಜಸ್ಥಾನದ ವಿವಿಧ ಭಾಗ ಹಾಗೂ ವಿಧರ್ಭಗಳಲ್ಲಿ ಹವಾಮಾನ ಇಲಾಖೆ ‘ರೆಡ್ ಕಲರ್’ ಮುನ್ನೆಚ್ಚರಿಕೆ ನೀಡಿದೆ. ‘ರೆಡ್ ಕಲರ್’ ಮುನ್ನೆಚ್ಚರಿಕೆ ನೀಡಲಾದ ಪ್ರದೇಶದಲ್ಲಿ ತಾಪಮಾನದ ತೀವ್ರತೆಯಿಂದ ಎಲ್ಲಾ ಪ್ರಾಯದ ಜನರಲ್ಲಿ ಅಸ್ವಸ್ಥತೆ ಹಾಗೂ ಪಾರ್ಶ್ವ ವಾಯು ಕಂಡು ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.