ಜೂನ್ 6ಕ್ಕೆ ಮುಂಗಾರು ಪ್ರವೇಶ ನಿರೀಕ್ಷೆ

ಹೊಸದಿಲ್ಲಿ, ಜೂ.1: ಸಾಮಾನ್ಯವಾಗಿ ಜೂನ್ 1ಕ್ಕೇ ಕೇರಳಕ್ಕೆ ಆಗಮಿಸುವ ಮುಂಗಾರು ಮಳೆ ಈ ಬಾರಿ ವಿಳಂಬವಾಗಿ ಅಂದರೆ ಜೂನ್ 6ಕ್ಕೆ ದೇಶವನ್ನು ಪ್ರವೇಶಿಸುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈಗಾಗಲೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹ, ಅರಬೀ ಸಮುದ್ರದ ದಕ್ಷಿಣ ಭಾಗ, ಬಂಗಾಳ ಕೊಲ್ಲಿಯ ಆಗ್ನೇಯ, ಈಶಾನ್ಯ ಭಾಗವನ್ನು ಮುಂಗಾರು ಆವರಿಸಿಕೊಂಡಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಅರಬಿ ಸಮುದ್ರದ ಇನ್ನಷ್ಟು ಪ್ರದೇಶಗಳನ್ನು ಆವರಿಸಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿ ಎಂ ಮೊಹಾಪಾತ್ರ ಹೇಳಿದ್ದಾರೆ. ಈ ಬಾರಿ ದೇಶದಲ್ಲಿ ಮುಂಗಾರು ಮಳೆ ಸಾಮಾನ್ಯ ಮಟ್ಟದಲ್ಲಿ ಇರಲಿದೆ ಎಂದು ನಿರೀಕ್ಷಿಸಲಾಗಿದೆ.
ದೇಶದ ಈಶಾನ್ಯ ರಾಜ್ಯಗಳಲ್ಲಿ ಮುಂದಿನ ನಾಲ್ಕೈದು ದಿನ ಗುಡುಗು ಸಹಿತ ಮಳೆ ಮುಂದುವರಿಯಲಿದೆ. ಆದರೆ ದಿಲ್ಲಿಯಲ್ಲಿ ಮಳೆಯಾಗುವ ನಿರೀಕ್ಷೆಯಿಲ್ಲ. ದಿಲ್ಲಿಯಲ್ಲಿ ಗರಿಷ್ಟ ತಾಪಮಾನದ ಪರಿಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದೇಶದ ಒಟ್ಟು ಮಳೆಯ ಪ್ರಮಾಣದ ಶೇ.70ರಷ್ಟು ಮಳೆ ಮುಂಗಾರು ಮಳೆಯ ಅವಧಿಯಲ್ಲಿ ಸುರಿಯುತ್ತದೆ. ಉತ್ತಮ ಮುಂಗಾರು ಮಳೆ ಕೃಷಿ ಕ್ಷೇತ್ರದ ಯಶಸ್ಸಿನ ಮೇಲೆ ಪರಿಣಾಮ ಬೀರುತ್ತದೆ.