ಜಾರ್ಖಂಡ್: ಮಾವೋವಾದಿಗಳ ದಾಳಿಗೆ ಓರ್ವ ಯೋಧ ಬಲಿ, ನಾಲ್ವರಿಗೆ ಗಾಯ

ರಾಂಚಿ, ಜೂ.2: ಜಾರ್ಖಂಡ್ನ ಡುಮ್ಕಾ ಜಿಲ್ಲೆಯ ಕಥಾಲಿಯಾ ಗ್ರಾಮದಲ್ಲಿ ರವಿವಾರ ನಡೆದ ಶಂಕಿತ ಮಾವೋವಾದಿಗಳ ದಾಳಿಗೆ ಕೇಂದ್ರ ಪೊಲೀಸ್ ಪಡೆಯ ಸಿಬ್ಬಂದಿ ಸಾವನ್ನಪ್ಪಿದರೆ, ಇತರ ನಾಲ್ವರು ಗಾಯಗೊಂಡಿದ್ದಾರೆ.
ಸಶಸ್ತ್ರ ಸೀಮಾ ಬಲ(ಎಸ್ಎಸ್ಬಿ) ಹಾಗೂ ರಾಜ್ಯ ಪೊಲೀಸ್ನ ಜಂಟಿ ತಂಡದ ಮೇಲೆೆ ಮಾವೋವಾದಿಗಳು ದಾಳಿ ನಡೆಸಿದ್ದರು. ಕೆಲವು ಮಾವೋವಾದಿಗಳು ಕೊಲ್ಲಲ್ಪಟ್ಟರು ಎಂದು ನಂಬಲಾಗಿದೆ. ಆದರೆ,ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಎಷ್ಟು ಮಂದಿ ಸತ್ತಿದ್ದಾರೆಂದು ಇನ್ನೂ ಖಚಿತವಾಗಿಲ್ಲ’’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹುತಾತ್ಮ ಯೋಧನನ್ನು ಅಸ್ಸಾಂನ ನೀರಜ್ ಚೆಟ್ರಿ ಎಂದು ಗುರುತಿಸಲಾಗಿದೆ. ದಾಳಿಯಲ್ಲಿ ಕಾನ್ಸ್ಟೇಬಲ್ ರಾಜೇಶ್ ರಾಯ್ ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಏರ್ಲಿಫ್ಟ್ ಮೂಲಕ ರಾಂಚಿಗೆ ಕೊಂಡೊಯ್ಯಲಾಗಿದ್ದು, ಇತರ ಸೈನಿಕರಿಗೆ ಡುಮ್ಕಾದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಸ್ಎಸ್ಬಿ ಕಮಾಂಡರ್ ಸಂಜಯ್ ಗುಪ್ತಾ ಹೇಳಿದ್ದಾರೆ.
Next Story





