ಪಿಲಿಕುಳದಲ್ಲಿ ಜೂ.8-9ರಂದು ಹಣ್ಣು-ಹಲಸು ಮೇಳ
ಮಂಗಳೂರು, ಜೂ.3: ಮಂಗಳೂರಿನ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಜೂ.8 ಮತ್ತು 9ರಂದು ‘ಹಣ್ಣು-ಹಲಸು ಮೇಳ’ವನ್ನು ತೋಟಗಾರಿಕಾ ಇಲಾಖಾ ಸಹಯೋಗದೊಂದಿಗೆ ಆಯೋಜಿಸಲಾಗಿದೆ.
ಕಾರ್ಯಕ್ರಮಕ್ಕೆ ಪ್ರಾದೇಶಿಕವಾದ ಹಲಸು, ಮಾವು ಹಾಗೂ ಇತರ ಹಣ್ಣುಗಳಲ್ಲದೆ ರಾಜ್ಯದ ಇತರ ಕಡೆಯ ಮೌಲ್ಯವರ್ದಿತ ಹಣ್ಣುಗಳನ್ನು ಬೆಳೆಗಾರರೇ ತಂದು ಪ್ರದರ್ಶಿಸಿ ಮಾರಾಟದ ವ್ಯವಸ್ಥೆಯನ್ನು ಮಾಡಲಾಗಿದೆ.
ಅಲ್ಲದೆ, ವಿವಿಧ ಹಣ್ಣುಗಳು, ಔಷಧೀಯ ಸಸಿಗಳು, ಕಸಿ ಗಿಡಗಳು, ಬೀಜಗಳು, ಖಾದಿ ಬಟ್ಟೆಗಳು, ಮಂಜಿಷ್ಟ, ದಾಳಿಂಬೆ ಸಿಪ್ಪೆ, ಅಳಲೆಕಾಯಿ, ನೀಲಿ, ಕಸಿನ್ಕಾರಿ ಮತ್ತು ಅಡಿಕೆ ಚೊಗರು ಮುಂತಾದ ಸಹಜ ಬಣ್ಣದಿಂದ ಸಂಸ್ಕರಿಸಲ್ಪಟ್ಟ ಕೈಮಗ್ಗಗಳ ವಸ್ತ್ರಗಳು, ಉಡುಪಿ ಸೀರೆಗಳು ಸಾವಯವ ಬಳಗದ ವಿವಿಧ ಆಹಾರ ಮತ್ತಿತ್ತರ ಪದಾರ್ಥಗಳು ಮತ್ತು ಕೃಷಿ ಉಪಕರಣಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನು ಮಾಡಲಾಗಿದೆ.
ಹಣ್ಣುಗಳಿಂದ ತಯಾರಿಸಲ್ಪಡುವ ವಿವಿಧ ಖಾದ್ಯಗಳು ಹಾಗೂ ಪಾನೀಯಗಳನ್ನು ಕೂಡ ಮಾರಾಟ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೆ, ಈ ಎರಡು ದಿನಗಳಲ್ಲಿ ಕರ್ನಾಟಕ ಸರಕಾರದ ಮೀನುಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಮೌಲ್ಯವರ್ದಿತ ಮೀನು ಮತ್ತು ಮೀನಿನ ಖಾದ್ಯಗಳನ್ನು ಪ್ರದರ್ಶಿಸಿ ಮಾರಾಟ ಮಾಡಲಾಗುವುದು. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಲು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟನೆ ತಿಳಿಸಿದೆ.





