ನಿವೃತ್ತ ಯೋಧ ಸನಾವುಲ್ಲಾ ಪ್ರಕರಣದಲ್ಲಿ ತಿರುವು: ತನಿಖಾ ವರದಿಯನ್ನು ತಿರುಚಿದ್ದ ಪೊಲೀಸ್ ಅಧಿಕಾರಿ

ಗುವಹಾಟಿ, ಜೂ.4: ಮಾಜಿ ಯೋಧ ಮುಹಮ್ಮದ್ ಸನಾವುಲ್ಲಾ ಅವರನ್ನು ಅಕ್ರಮ ವಲಸಿಗ ಎಂದು ಘೋಷಿಸಲ್ಪಟ್ಟ ಕೇಸ್ ರಿಪೋರ್ಟ್ ಗೆ ಸಹಿ ಹಾಕಿದ್ದಾರೆನ್ನಲಾದ ಮೂವರು ಇದೀಗ ಯು-ಟರ್ನ್ ಹೊಡೆದಿದ್ದು, ಈ ಪ್ರಕರಣದಲ್ಲಿ ಯಾವುದೇ ತನಿಖೆ ನಡೆದಿಲ್ಲ ಎಂದಿದ್ದಾರೆ. ಮೂವರೂ ಇದೀಗ ಪೊಲೀಸ್ ದೂರು ದಾಖಲಿಸಿ ಪ್ರಕರಣದ ಅಧಿಕಾರಿಯಾಗಿರುವ ಚಂದ್ರಮಲ್ ದಾಸ್ ಅವರು ತನಿಖಾ ವರದಿಯನ್ನು ತಿರುಚಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ತಿರುಚಿದ ವರದಿಯ ಆಧಾರದಲ್ಲಿಯೇ 30 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಹಾಗೂ ನಂತರ ಅಸ್ಸಾಂ ಗಡಿ ಭದ್ರತಾ ಪೊಲೀಸ್ ಇಲಾಖೆ ಸೇರಿದ್ದ ಸನಾವುಲ್ಲಾ ಅವರನ್ನು ಬಂಧಿಸಿ ದಿಗ್ಬಂಧನ ಕೇಂದ್ರದಲ್ಲಿ ಕಳೆದ ವಾರ ಇರಿಸಲಾಗಿದೆ. ದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿಗ ಎಂಬ ಆರೋಪ ಅವರ ಮೇಲಿದೆ.
ಅಸ್ಸಾಂ ಬಾರ್ಡರ್ ಪೊಲೀಸ್ ಇಲಾಖೆಯಿಂದ ನಿವೃತ್ತರಾಗಿರುವ ಮಾಜಿ ಅಧಿಕಾರಿ ಚಂದ್ರಮಲ್ ದಾಸ್ ಆವರ ಪ್ರಕಾರ ಅವರು ತನಿಖೆ ನಡೆಸಿದ ವ್ಯಕ್ತಿ ಸುಬೇದಾರ್ ಮುಹಮ್ಮದ್ ಸನಾವುಲ್ಲಾ ಅವರಾಗಿರಲಿಲ್ಲ. ಆದರೆ ಅವರು ತನಿಖೆ ನಡೆಸಿದ ವ್ಯಕ್ತಿಯ ಹೆಸರು ಕೂಡ ಸನಾವುಲ್ಲಾ ಆಗಿದ್ದರಿಂದಲೇ ಇಂತಹ ಪ್ರಮಾದ ಆಗಿರಬಹುದೆಂದು ಅವರು ತಿಳಿಸಿದ್ದಾರೆ.
ಆದರೆ ಸನಾವುಲ್ಲಾ ಅವರ ಗ್ರಾಮವಾದ ಕೊಲೊಹಿಕಶ್ ಇಲ್ಲಿನ ಸಾಕ್ಷಿಗಳ ಹೇಳಿಕೆ ಈ ವರದಿಯಲ್ಲಿ ಹೇಗೆ ಸೇರಿಕೊಂಡಿದೆ ಎಂಬುದು ನಿಗೂಢ.
“ನಾನು ಆ ಪೊಲೀಸ್ ಅಧಿಕಾರಿಯನ್ನು ಭೇಟಿಯಾಗಿಲ್ಲ ಹಾಗೂ ತನಿಖೆಗೂ ನನ್ನನ್ನು ಕರೆಯಲಾಗಿರಲಿಲ್ಲ. 2008-2009ರಲ್ಲಿ ನಾನು ನನ್ನ ಗ್ರಾಮದಲ್ಲಿರಲಿಲ್ಲ, ಗುವಾಹಟಿಯಲ್ಲಿದ್ದೆ. ಸನಾವುಲ್ಲಾ ಕೂಡ ಅಲ್ಲಿರಲಿಲ್ಲ, ಅವರು ಸೇನೆಯಲ್ಲಿದ್ದರು'' ಎಂದು ವರದಿಯಲ್ಲಿ ಸಾಕ್ಷಿಗಳಲ್ಲೊಬ್ಬರಾಗಿ ಹೆಸರಿಸಲ್ಪಟ್ಟಿರುವ ಅಲಿ ಎಂಬವರು ಹೇಳುತ್ತಾರೆ.
ಈ ಪ್ರಕರಣದ ತನಿಖೆ ನಡೆದಾಗ ಮುಹಮ್ಮದ್ ಸನಾವುಲ್ಲಾ ಮಣಿಪುರದಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂಬುದು ಅವರ ಸೇವಾ ದಾಖಲೆಯಿಂದ ತಿಳಿದುಬರುತ್ತದೆ. ಚಂದ್ರಮಲ್ ದಾಸ್ ಕೂಡ ಸನಾವುಲ್ಲಾ ಅಸ್ಸಾಂನಲ್ಲಿರಲಿಲ್ಲ ಎಂಬುದನ್ನು ಒಪ್ಪುತ್ತಾರೆ. ವರದಿಯಲ್ಲಿನ ಇತರ ಇಬ್ಬರು ಸಾಕ್ಷಿಗಳಾದ ಸಹಬನ್ ಅಲಿ ಹಾಗೂ ಅಮ್ಜದ್ ಅಲಿ ಕೂಡ ಚಂದ್ರಮಲ್ ದಾಸ್ ವಿರುದ್ಧ ಪ್ರತ್ಯೇಕ ದೂರು ದಾಖಲಿಸಿದ್ದಾರೆ.
ಕಾನೂನಿನ ಪ್ರಕಾರ ಮುಂದುವರಿಯುತ್ತಿದ್ದೇವೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.