ಪಠ್ಯಪುಸ್ತಕದ ಮುಖಪುಟದಲ್ಲಿ ಕೇಸರಿ ಮುಂಡಾಸು ಧರಿಸಿದ ಭಾರತಿಯಾರ್: ಡಿಎಂಕೆ ಆಕ್ರೋಶ

ಚೆನ್ನೈ, ಜೂ.4: ಶಿಕ್ಷಣ ಮಂಡಳಿಯ 12ನೇ ತರಗತಿ ಸಾಮಾನ್ಯ ತಮಿಳು ಪಾಠಪುಸ್ತಕದ ಮುಖಪುಟದಲ್ಲಿ ತಮಿಳು ಕವಿ ಸುಬ್ರಮಣ್ಯ ಭಾರತಿ ಅಥವಾ ಭಾರತಿಯಾರ್ ಅವರ ಕೇಸರಿ ಮುಂಡಾಸು ಧರಿಸಿದ ಭಾವಚಿತ್ರ ಹಾಕಿರುವ ಬಗ್ಗೆ ಡಿಎಂಕೆ ಆಕ್ರೋಶ ವ್ಯಕ್ತಪಡಿಸಿದೆ. “ಸಾಮಾನ್ಯವಾಗಿ ಭಾರತಿಯಾರ್ ಅವರು ಬಿಳಿ ಬಣ್ಣದ ಮುಂಡಾಸು ಧರಿಸಿರುವಂತೆ ಚಿತ್ರಿಸಲಾಗುತ್ತದೆ. ಭಾರತಿಯಾರ್ ಅವರು ಕೇಸರಿ ಮುಂಡಾಸು ಧರಿಸಿರುವುದನ್ನು ಯಾರು, ಯಾವಾಗ ನೋಡಿದ್ದಾರೆ?” ಎಂದು ಡಿಎಂಕೆ ಶಾಸಕ ಮತ್ತು ಮಾಜಿ ಶಾಲಾ ಶಿಕ್ಷಣ ಸಚಿವ ತಂಗಮ್ ತೇನರಸು ಪ್ರಶ್ನಿಸಿದ್ದಾರೆ. ಜೊತೆಗೆ ಇದು ಪಠ್ಯಪುಸ್ತಕವನ್ನು ಕೇಸರೀಕರಣಗೊಳಿಸುವ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದಾರೆ.
ಸಾಮಾನ್ಯ ತಮಿಳು ಪಠ್ಯಪುಸ್ತಕವನ್ನು ಶಾಲಾ ಶಿಕ್ಷಣ ಸಚಿವ ಕೆ.ಎ ಸೆಂಗೋಟೆಯನ್ ಮತ್ತು ತಮಿಳುನಾಡು ಪಠ್ಯಪುಸ್ತಕ ಮತ್ತು ಶೈಕ್ಷಣಿಕ ಸೇವಾ ನಿಗಮದ ಮುಖ್ಯಸ್ಥ ಬಿ. ವಲರ್ಮತಿ ಚೆನ್ನೈಯಲ್ಲಿ ಬಿಡುಗಡೆ ಮಾಡಿದ್ದರು. ಶಿಕ್ಷಣವನ್ನು ಕೇಸರೀಕರಣಗೊಳಿಸಲಾಗುತ್ತಿದೆ ಎನ್ನುವ ಆರೋಪವನ್ನು ತಳ್ಳಿಹಾಕಿರುವ ವಲರ್ಮತಿ, ಇದು ರಾಜ್ಯ ಸರಕಾರ ತಯಾರಿಸಿದ ಪುಸ್ತಕವಾಗಿದ್ದು ಶಿಕ್ಷಣದಲ್ಲಿ ಧರ್ಮ ಅಥವಾ ರಾಜಕೀಯವನ್ನು ಬೆರೆಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.