ಅಮರನಾಥ ಯಾತ್ರೆ ಬಳಿಕ ಜಮ್ಮು ಕಾಶ್ಮೀರ ಚುನಾವಣೆ

ಹೊಸದಿಲ್ಲಿ, ಜೂ.5: ಅಮರನಾಥ ಯಾತ್ರೆ, ಸೇಬು ಕೊಯ್ಲು ಮತ್ತು ಬಕರ್ವಾಲಾರ ವಲಸೆ ಪ್ರಕ್ರಿಯೆ ಮುಗಿದ ಬಳಿಕವಷ್ಟೇ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆ ನಡೆಸುವುದು ಸೂಕ್ತ ಎಂಬ ಗೃಹ ಸಚಿವಾಲಯ ಹಾಗೂ ರಾಜ್ಯಾಡಳಿತದ ಸಲಹೆಯನ್ನು ಚುನಾವಣಾ ಆಯೋಗ ಒಪ್ಪಿದೆ. ಈ ಮೂಲಕ ಈ ವರ್ಷದ ಕೊನೆಯ ವೇಳೆಗೆ ಚುನಾವಣೆ ನಡೆಸುವ ಸುಳಿವು ದೊರಕಿದೆ.
ಚುನಾವಣಾ ಆಯೋಗವು ಸಂವಿಧಾನದ 324ನೇ ವಿಧಿ ಮತ್ತು ಅನ್ವಯವಾಗುವ ಇತರ ನಿಯಮಾವಳಿಗಳ ಪ್ರಕಾರ, ಈ ವರ್ಷದ ಕೊನೆಯ ವೇಳೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ನಡೆಸಲು ಒಮ್ಮತದ ನಿರ್ಣಯ ಕೈಗೊಂಡಿದೆ. ಜಮ್ಮು ಕಾಶ್ಮೀರದ ಸ್ಥಿತಿಗತಿಯನ್ನು ಆಯೋಗ ನಿಯತವಾಗಿ ಅವಲೋಕಿಸಲಿದೆ. ಅಮರನಾಥ ಪಾತ್ರೆ ಬಳಿಕ ಎಲ್ಲ ಕಡೆಗಳಿಂದ ಸಲಹೆಗಳನ್ನು ಪಡೆದು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಆಯೋಗದ ಪ್ರಕಟಣೆ ಹೇಳಿದೆ.
ಅಕ್ಟೋಬರ್- ನವೆಂಬರ್ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಸುವುದು ಸೂಕ್ತ ಎಂದು ಗೃಹ ಸಚಿವಾಲಯ ಹಾಗೂ ಜಮ್ಮು ಕಾಶ್ಮೀರ ಸರ್ಕಾರ ಸಲಹೆ ಮಾಡಿತ್ತು. 1983ರಿಂದೀಚೆಗೆ ಸೆಪ್ಟೆಂಬರ್ ಹಾಗೂ ಡಿಸೆಂಬರ್ ನಡುವೆಯೇ ಚುನಾವಣೆಗಳು ಇಲ್ಲಿ ನಡೆಯುತ್ತಿವೆ. ಜತೆಗೆ ಅಮರನಾಥ ಯಾತ್ರೆಗೆ ಮುಂಚಿತವಾಗಿ ಭದ್ರತಾ ಪಡೆ ನಿಯೋಜಿಸಬೇಕಾಗಿರುವುದರಿಂದ, ಸೆಪ್ಟೆಂಬರ್- ಅಕ್ಟೋಬರ್ ನಲ್ಲಿ ಸೇಬು ಕಟಾವು ಇರುವುದರಿಂದ ಹಾಗೂ ಬಕರ್ವಾಲಾಗಳು ಎತ್ತರದ ಪ್ರದೇಶಗಳಿಗೆ ಬೇಸಿಗೆಯಲ್ಲಿ ವಲಸೆ ಹೋಗುವುದರಿಂದ ಅಕ್ಟೋಬರ್ ಬಳಿಕ ಸೂಕ್ತ ಎಂದು ಶಿಫಾರಸ್ಸು ಮಾಡಲಾಗಿತ್ತು.