ಎಂಟು ಸಂಪುಟ ಸಮಿತಿಗಳ ರಚನೆ: ಪ್ರಗತಿ, ನೇಮಕಾತಿ ಸಮಿತಿಗಳಿಗೆ ಪ್ರಧಾನಿ ನೇತೃತ್ವ

ಹೊಸದಿಲ್ಲಿ,ಜೂ.6: ನಿಧಾನ ಪ್ರಗತಿ ಮತ್ತು ನಿರುದ್ಯೋಗ ಸಮಸ್ಯೆಗಳನ್ನು ಎದುರಿಸಲು ಎರಡು ಸಮಿತಿಗಳು ಸೇರಿದಂತೆ ಎಂಟು ಸಂಪುಟ ಸಮಿತಿಗಳ ರಚನೆಯನ್ನು ಕೇಂದ್ರ ಸರಕಾರವು ಗುರುವಾರ ಪ್ರಕಟಿಸಿದೆ.
ಹೂಡಿಕೆ ಮತ್ತು ಪ್ರಗತಿ ಹಾಗೂ ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಕುರಿತು ಸಂಪುಟ ಸಮಿತಿಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಅಧ್ಯಕ್ಷರಾಗಿದ್ದಾರೆ. ಇದೇ ಮೊದಲ ಬಾರಿಗೆ ಈ ವಿಷಯಗಳಿಗಾಗಿ ಸಂಪುಟ ಸಮಿತಿಗಳನ್ನು ರಚಿಸಲಾಗಿದೆ.
ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಮತ್ತು ಪಿಯೂಷ್ ಗೋಯಲ್ ಅವರು ಇವೆರಡೂ ಸಮಿತಿಗಳ ಸದಸ್ಯರಾಗಿದ್ದಾರೆ. ಇನ್ನೋರ್ವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಹೂಡಿಕೆ ಮತ್ತು ಪ್ರಗತಿ ಸಮಿತಿಯಲ್ಲಿದ್ದು,ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಸಮಿತಿಯಲ್ಲಿ ಅವರನ್ನು ‘ವಿಶೇಷ ಆಹ್ವಾನಿತರು’ ಎಂದು ಪಟ್ಟಿಯಲ್ಲಿ ಸೇರಿಸಲಾಗಿದೆ.
ನೂತನ ಸರಕಾರವು ಅಧಿಕಾರಕ್ಕೆ ಬಂದಾಗ ಅಥವಾ ಸಂಪುಟ ಪುನರ್ ರಚನೆಯಾದಾಗ ಸಂಪುಟ ಸಮಿತಿಗಳನ್ನು ರಚಿಸಲಾಗುತ್ತದೆ ಅಥವ ಪುನರ್ ರಚಿಸಲಾಗುತ್ತದೆ.
ಸುರಕ್ಷತೆ ಕುರಿತು ಸಂಪುಟ ಸಮಿತಿಯು ಮೋದಿ, ರಾಜನಾಥ್ ಸಿಂಗ್, ಅಮಿತ್ ಶಾ, ಸೀತಾರಾಮನ್ ಮತ್ತು ಎಸ್.ಜೈಶಂಕರ್ ಹಾಗೂ ನೇಮಕಾತಿ ಕುರಿತು ಸಂಪುಟ ಸಮಿತಿಯು ಮೋದಿ ಮತ್ತು ಶಾ ಅವರನ್ನೊಳಗೊಂಡಿದೆ.
ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಕುರಿತು ಸಮಿತಿಯು ಸಿಂಗ್, ಅಮಿತ್ ಶಾ, ಗಡ್ಕರಿ, ಡಿ.ವಿ.ಸದಾನಂದ ಗೌಡ, ಸೀತಾರಾಮನ್, ನರೇಂದ್ರ ಸಿಂಗ್ ತೋಮರ್, ರವಿಶಂಕರ ಪ್ರಸಾದ್, ಹರ್ಸಿಮ್ರತ್ ಕೌರ್, ಜೈಶಂಕರ್, ಗೋಯಲ್ ಮತ್ತು ಧಮೇಂದ್ರ ಪ್ರಧಾನ ಅವರನ್ನು ಒಳಗೊಂಡಿದ್ದರೆ, ಶಾ ನೇತೃತ್ವದ ವಸತಿ ಕುರಿತ ಸಂಪುಟ ಸಮಿತಿಗೆ ಗಡ್ಕರಿ, ಸೀತಾರಾಮನ್ ಗೋಯಲ್ ಅವರು ಸದಸ್ಯರು ಹಾಗೂ ಜಿತೇಂದ್ರ ಸಿಂಗ್ ಮತ್ತು ಹರ್ದೀಪ್ ಪುರಿ ಅವರು ವಿಶೇಷ ಆಹ್ವಾನಿತರಾಗಿದ್ದಾರೆ.
ಶಾ ನೇತೃತ್ವದ ಸಂಸದೀಯ ವ್ಯವಹಾರಗಳ ಸಮಿತಿಯು ಸೀತಾರಾಮನ್, ರಾಮವಿಲಾಸ್ ಪಾಸ್ವಾನ್, ತೋಮರ್, ಪ್ರಸಾದ, ಥಾವರಚಂದ್ ಗೆಹ್ಲೋಟ್, ಪ್ರಕಾಶ್ ಜಾವಡೇಕರ್ ಮತ್ತು ಪ್ರಹ್ಲಾದ ಜೋಶಿ ಅವರನ್ನು ಸದಸ್ಯರನ್ನಾಗಿ ಹಾಗೂ ಅರ್ಜುನ ರಾಮ್ ಮೇಘ್ವಾಲ್ ಮತ್ತು ವಿ.ಮುರಳೀಧರನ್ ಅವರನ್ನು ವಿಶೇಷ ಆಹ್ವಾನಿತರನ್ನಾಗಿ ಹೊಂದಿದೆ.
ಮೋದಿ ನೇತೃತ್ವದ ರಾಜಕೀಯ ವ್ಯವಹಾರಗಳ ಸಮಿತಿಗೆ ಶಾ, ಗಡ್ಕರಿ, ಸೀತಾರಾಮನ್, ಗೋಯಲ್, ಪಾಸ್ವಾನ್, ತೋಮರ್, ಪ್ರಸಾದ್, ಹರ್ಸಿಮ್ರತ್ ಕೌರ್ ಬಾದಲ್, ಹರ್ಷವರ್ಧನ, ಅರವಿಂದ ಸಾವಂತ ಮತ್ತು ಜೋಶಿ ಸದಸ್ಯರಾಗಿದ್ದಾರೆ.