ಏರುತ್ತಿರುವ ನಿರುದ್ಯೋಗ ಪ್ರಮಾಣ: ಮಾಯಾವತಿಯಿಂದ ಕೇಂದ್ರ ಸರಕಾರದ ತರಾಟೆ
ಲಕ್ನೋ, ಜೂ. 5: ದೇಶದಲ್ಲಿ ನಿರುದ್ಯೋಗ ಪ್ರಮಾಣ ಕಳೆದ 45 ವರ್ಷಗಳಲ್ಲೇ ಅತ್ಯಧಿಕ ಶೇ. 6.1ರಷ್ಟು ಏರಿಕೆ ದಾಖಲಾಗಿರುವುದಕ್ಕೆ ಬಿಎಸ್ಪಿ ವರಿಷ್ಠೆ ಮಾಯಾವತಿ ಗುರುವಾರ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಅಧಿಕಾರ ಸ್ವೀಕರಿಸಿದ ಸಂದರ್ಭ ದೇಶದಲ್ಲಿ ನಿರುದ್ಯೋಗ ಅತಿ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಲೋಕಸಭಾ ಚುನಾವಣೆಯ ಬಳಿಕ ಕಾರ್ಮಿಕ ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶ ದೇಶದಲ್ಲಿ ನಿರುದ್ಯೋಗ ಪ್ರಮಾಣ ಕಳೆದ 45 ವರ್ಷಗಳಲ್ಲೇ ಅತ್ಯಧಿಕ ಶೇ. 6.1 ಏರಿಕೆಯಾಗಿರುವ ಕೆಟ್ಟ ಸುದ್ದಿಯನ್ನು ದೃಢಪಡಿಸಿದೆ ಎಂದು ಮಾಯಾವತಿ ಹೇಳಿದ್ದಾರೆ.
ಈ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ವಿಫಲವಾಗಿರುವುದಕ್ಕೆ ಹಾಗೂ ಜಿಡಿಪಿ ಪ್ರಗತಿ ಇಳಿಕೆಯಾಗಿರುವುದಕ್ಕೆ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಮಾಯಾವತಿ, ಜಿಡಿಪಿ ಶೇ. 5.8 ಇಳಿಕೆಯಾಗಿರುವುದು ದೇಶಕ್ಕೆ ಉತ್ತಮ ಸುದ್ದಿ ಅಲ್ಲ. ಕೃಷಿ ಹಾಗೂ ಕೈಗಾರಿಕೆ ಉತ್ಪನ್ನಗಳು ಇಳಿಕೆಯಾಗಿರುವುದು ಜಿಡಿಪಿ ಪ್ರಗತಿ ಇಳಿಕೆಯಾಗಲು ಕಾರಣ ಎಂದರು.
Next Story