ಹಾಸನ: ನೀಟ್ ರ್ಯಾಂಕ್ ಸಾಧಕರಿಗೆ ಜಿಲ್ಲಾಧಿಕಾರಿ ಅಭಿನಂದನೆ
ಹಾಸನ, ಜೂ. 6: ನೀಟ್ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 36ನೇ ರ್ಯಾಂಕ್ಗಳಿಸಿದ ಜಿಲ್ಲೆಯ ಡಿ.ಆರ್. ಪಣೀಂದ್ರ ಹಾಗೂ 54ನೇ ರ್ಯಾಂಕ್ ಗಳಿಸಿರುವ ವಿ.ಕೆ. ಯಶಸ್ ಅವರಿಗೆ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಪೋಷಕರೊಂದಿಗೆ ಕರೆಸಿ ಅಭಿನಂದಿಸಿ ಪ್ರೋತ್ಸಾಹದ ಮಾತುಗಳನ್ನಾಡಿದ ಅವರು ಮುಂದೆಯೂ ಉತ್ತಮ ಸಾಧನೆಗೈದು ಸಮಾಜಕ್ಕೆ ಆಸ್ತಿಗಳಾಗಿ ರೂಪುಗೊಂಡು ಬಹುದೊಡ್ಡ ಸಾಧನೆ ಮಾಡುವಂತೆ ಹಿತವಚನ ಹೇಳಿದರು.
ಈ ಇಬ್ಬರೂ ವಿದ್ಯಾರ್ಥಿಗಳು 10ನೇ ತರಗತಿಯವರೆಗೆ ಮಾವಿನಕೆರೆ ನವೋದಯ ಶಾಲೆಯಲ್ಲಿ ಓದಿರುವುದು ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳಾಗಿರುವುದರಿಂದ ಜಿಲ್ಲೆಗೆ ವಿಶೇಷ ಹೆಮ್ಮೆ ಎನಿಸಿದೆ. ಇತರ ಎಲ್ಲಾ ವಿದ್ಯಾರ್ಥಿಗಳಿಗೂ ಹಾಗೂ ಸರಕಾರಿ ಶಾಲೆಗಳಿಗೆ, ವಿಶೇಷವಾಗಿ ವಸತಿ ಶಾಲೆಗಳಿಗೆ ಇವರು ಮಾದರಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟರು.
ಈ ಬಾರಿ ಎಸೆಸೆಲ್ಸಿಯಲ್ಲಿ ಜಿಲ್ಲೆ ಪ್ರಥಮ ಸ್ಥಾನಗಳಿಸಿದ್ದು, ಪ್ರಥಮ ರ್ಯಾಂಕ್ ಕೂಡ ಬಂದಿದೆ. ದ್ವಿತೀಯ ಪಿಯುಸಿಯಲ್ಲೂ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ನೀಟ್ ಪರೀಕ್ಷೆಯಲ್ಲೂ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿರುವುದು ಜಿಲ್ಲೆಯ ಹಿರಿಮೆ ಇನ್ನಷ್ಟು ಹೆಚ್ಚಾಗಿದೆ ಎಂದು ಅಕ್ರಂ ಪಾಷ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಡಿ.ರೇವಣ್ಣ ಅವರು ಶಿಕ್ಷಣದ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಮುಂದೆ ಜಿಲ್ಲಾಡಳಿತದಿಂದ ಯಾವುದೇ ನೆರವು ಅಗತ್ಯವಿದ್ದಲ್ಲಿ ಒದಗಿಸಲಾುವುದು ಎಂದು ಅವರು ತಿಳಿಸಿದರು.
ಇದೇ ವೇಳೆ ಜಿಲ್ಲಾಧಿಕಾರಿ ಮಾವಿನಕೆರೆ ನವೋದಯ ವಿದ್ಯಾಲಯದ ಪ್ರಾಂಶುಪಾಲರನ್ನು ಹಾಗೂ ವಿದ್ಯಾರ್ಥಿಗಳ ಪೋಷಕರನ್ನು ಅಭಿನಂದಿಸಿದರು. ನೀಟ್ ಪರೀಕ್ಷೆಯಲ್ಲಿ 36ನೇ ರ್ಯಾಂಕ್ ಪಡೆದ ಡಿ.ಆರ್. ಪಣೀಂದ್ರ ಅರಕಲಗೂಡು ತಾಲೂಕಿನ ರಾಮನಾಥಪುರದ ನಿವಾಸಿಯಾಗಿದ್ದಾರೆ. ಇವರ ತಂದೆ ಡಿ.ಬಿ.ರಮೇಶ್ ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರದಲ್ಲಿ ಸರಕಾರಿ ಪ್ರೌಢಶಾಲೆ ಶಿಕ್ಷಕರಾಗಿದ್ದು, ತಾಯಿ ಮಧುರಾ ಕೆಪಿಟಿಸಿಎಲ್ ಇಂಜಿನಿಯರ್ ಆಗಿದ್ದಾರೆ.
ಡಿ.ಆರ್.ಪಣೀಂದ್ರ ಅವರು 10ನೇ ತರಗತಿಯವರೆಗೆ ಮಾವಿನಕೆರೆ ನವೋದಯ ವಿದ್ಯಾಲಯದಲ್ಲಿ ಓದಿ ನೀಟ್ ಪರೀಕ್ಷೆ ತರಬೇತಿ ಪಡೆಯುವ ಉದ್ದೇಶದಿಂದ ನಡೆಸಿದ ಪರೀಕ್ಷೆಯಲ್ಲಿ ಆಯ್ಕೆಯಾಗಿ ಪುಣೆಗೆ ತೆರಳಿ ಅಲ್ಲಿ 12ನೇ ತರಗತಿವರೆಗೂ ನವೋದಯ ವಿದ್ಯಾಲಯಲದಲ್ಲಿಯೇ ಓದಿದ್ದಾರೆ.
ಇನ್ನೋರ್ವ ವಿದ್ಯಾರ್ಥಿ ವಿ.ಕೆ. ಯಶಸ್ ಅವರು ಅರಕಲಗೂಡು ತಾಲೂಕು ಕೊಣನೂರು ಬಳಿಯ ವಡವನ ಹೊಸಳ್ಳಿ ನಿವಾಸಿ. ತಂದೆ ಕೃಷ್ಣಶೆಟ್ಟಿ ಬಾನಗುಂದಿ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಶಿಕ್ಷಕರು,ತಾಯಿ ಚಂದ್ರಕಲಾ ಗೃಹಿಣಿಯಾಗಿದ್ದಾರೆ.
10ನೇ ತರಗತಿಯವರೆಗೆ ಮಾವಿನಕೆರೆ ಜವಾಹರ್ ನವೋದಯ ವಿದ್ಯಾಲಯದಲ್ಲಿ ಓದಿದ ಯಶಸ್ ನಂತರ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ಮುಗಿಸಿದ್ದಾರೆ.
ಈ ಸಂದರ್ಭದಲ್ಲಿ ಮಾವಿನಕೆರೆ ನವೋದಯ ವಿದ್ಯಾಲಯದ ಪ್ರಾಂಶುಪಾಲ ಕೆ. ಪಾರ್ಥಿಬನ್ ಮತ್ತಿತರರು ಉಪಸ್ಥಿತರಿದ್ದರು.