ಕೇಂದ್ರ ಜಾಗ್ರತ ಆಯೋಗದ ಉನ್ನತ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಗಡುವು ವಿಸ್ತರಣೆ

ಹೊಸದಿಲ್ಲಿ,ಜೂ.7: ಸೂಕ್ತ ಅಭ್ಯರ್ಥಿಗಳಿಂದ ಪ್ರತಿಕ್ರಿಯೆಯ ಕೊರತೆಯಿಂದಾಗಿ ಕೇಂದ್ರ ಜಾಗ್ರತ ಆಯೋಗ(ಸಿವಿಸಿ)ದ ಉನ್ನತ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಸರಕಾರವು ಸತತ ಮೂರನೇ ಬಾರಿಗೆ ವಿಸ್ತರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಜಾಗ್ರತ ಆಯುಕ್ತ ಮತ್ತು ಜಾಗ್ರತ ಆಯುಕ್ತರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಸಿಬ್ಬಂದಿ ಸಚಿವಾಲಯವು ಮಾರ್ಚ್ ಅಂತ್ಯದಲ್ಲಿ ಆರಂಭಿಸಿತ್ತು.
ಸಚಿವಾಲಯಕ್ಕೆ ಅರ್ಜಿಗಳನ್ನು ಸಲ್ಲಿಸಲು ಮೇ 1 ಕೊನೆಯ ದಿನಾಂಕವಾಗಿದ್ದು,ಮೊದಲ ಬಾರಿಗೆ ಅದನ್ನು ಮೇ.22ಕ್ಕೆ ಮತ್ತು ನಂತರ ಜೂ.6ಕ್ಕೆ ವಿಸ್ತರಿಸಲಾಗಿತ್ತು. ಇದೀಗ ಅಂತಿಮ ದಿನಾಂಕವನ್ನು ಜೂ.17ಕ್ಕೆ ವಿಸ್ತರಿಸಲಾಗಿದೆ ಎಂದು ಸಚಿವಾಲಯವು ತಿಳಿಸಿದೆ.
ಹಾಲಿ ಕೇಂದ್ರ ಜಾಗ್ರತ ಆಯುಕ್ತ ಕೆ.ವಿ.ಚೌಧರಿ ಮತ್ತು ಜಾಗ್ರತ ಆಯುಕ್ತ ಟಿ.ಎಂ.ಭಾಸಿನ್ ಅವರು ಈ ತಿಂಗಳು ಸೇವೆಯಿಂದ ನಿವೃತ್ತರಾಗಲಿದ್ದಾರೆ.
ಸಿವಿಸಿಯು ಓರ್ವ ಕೇಂದ್ರ ಜಾಗ್ರತ ಆಯುಕ್ತ ಮತ್ತು ಇಬ್ಬರು ಜಾಗ್ರತ ಆಯುಕ್ತರ ಹುದ್ದೆಗಳನ್ನು ಹೊಂದಿದ್ದು,ಎನ್ಐಎ ಮಾಜಿ ಮುಖ್ಯಸ್ಥ ಶರದ ಕುಮಾರ ಅವರು ಇನ್ನೋರ್ವ ಜಾಗ್ರತ ಆಯುಕ್ತರಾಗಿದ್ದಾರೆ.
ಸಾಕಷ್ಟು ಸಂಖ್ಯೆಯಲ್ಲಿ ಅರ್ಜಿಗಳು ಬಂದಿಲ್ಲ. ಹೆಚ್ಚು ಜನರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುವಂತೆ ಅಂತಿಮ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಹಿರಿಯ ಸರಕಾರಿ ಅಧಿಕಾರಿಯೋರ್ವರು ಶುಕ್ರವಾರ ಇಲ್ಲಿ ತಿಳಿಸಿದರು.
ಆಸಕ್ತರು ಸಿಬ್ಬಂದಿ ಸಚಿವಾಲಯಕ್ಕೆ ಅರ್ಜಿ ಜೊತೆಗೆ ತಾವೇಕೆ ಈ ಹುದ್ದೆಗಳಿಗೆ ಅರ್ಹರು ಎನ್ನುವುದನ್ನು ಸಮರ್ಥಿಸಿಕೊಂಡು 300 ಶಬ್ದಗಳಿಗೆ ಮೀರದಂತೆ ಬರಹವನ್ನು ಸಲ್ಲಿಸಬೇಕಿದೆ. ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 25 ವರ್ಷಗಳ ಅನುಭವ ಹೊಂದಿರಬೇಕು. ಅಖಿಲ ಭಾರತ ಸೇವೆಗಳಲ್ಲಿರುವ ಅಥವಾ ಇದ್ದ ವ್ಯಕ್ತಿಗಳನ್ನು ಈ ಹುದ್ದೆಗಳಿಗೆ ನೇಮಿಸಲಾಗುತ್ತದೆ. ನಾಲ್ಕು ವರ್ಷಗಳಿಗೆ ಅಥವಾ ತಮಗೆ 65 ವರ್ಷಗಳಾಗುವವರೆಗೆ ಅವರು ಅಧಿಕಾರದಲ್ಲಿರುತ್ತಾರೆ ಎಂದು ಸಚಿವಾಲಯವು ತಿಳಿಸಿದೆ.