ಗೋರಿಗಳ ಮಧ್ಯೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ
ಮೌಢ್ಯತೆ ವಿರುದ್ಧ ಸಮರ ಸಾರಿದ ಯುವಕರು

ಕಲಬುರಗಿ, ಜೂ.8: ಹುಟ್ಟುಹಬ್ಬ ಅಂದರೆ ಯುವ ಜನತೆಗೆ ಖುಷಿಯೋ ಖುಷಿ. ಹೊಟೇಲ್, ಕ್ಲಬ್, ರೆಸಾರ್ಟ್, ಪಾರ್ಕ್ಗಳಲ್ಲಿ ಕೇಕ್ ಕತ್ತರಿಸಿ ಆಡಂಬರದ ಜನ್ಮದಿನ ಆಚರಿಸುವುದನ್ನು ನಾವು ನೋಡಿದ್ದೇವೆ. ಆದರೆ, ಇಲ್ಲಿ ಇಬ್ಬರು ಯುವಕರು ಸ್ಮಶಾನ ಭೂಮಿಯಲ್ಲಿ ಗೋರಿಗಳ ಮಧ್ಯೆ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.
ಹೀಗೆ ವಿನೂತನ ರೀತಿಯಲ್ಲಿ ಜನ್ಮದಿನ ಆಚರಣೆ ಮಾಡಿಕೊಂಡವರು ಶ್ರವಣಕುಮಾರ ಮೋಸಲಗಿ ಹಾಗೂ ರವಿಕುಮಾರ ಪೂಜಾರಿ. ಇಬ್ಬರು ಯುವಕರು ತಮ್ಮ ಹುಟ್ಟುಹಬ್ಬವನ್ನು ಕಲಬುರಗಿಯ ವಾಡಿ ಪಟ್ಟಣದ ರುದ್ರಭೂಮಿಯಲ್ಲಿನ ಗೋರಿಗಳ ಮಧ್ಯೆ ತಮ್ಮ ಸ್ನೇಹಿತರೊಂದಿಗೆ ಕೇಕ್ ಕತ್ತರಿಸಿ ಸರಳವಾಗಿ ಆಚರಿಸಿಕೊಂಡರು.
ಇದೇ ವೇಳೆ ಸ್ಮಶಾನದಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ಪ್ರೇಮವನ್ನೂ ಮೆರೆದರು. ಈ ಮೂಲಕ ಮೌಢ್ಯತೆ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ದೂರ ಮಾಡಲು ಪ್ರಯತ್ನಿಸಿದ್ದಾರೆ. ವೈಚಾರಿಕ ಮನೋಭಾವನೆವುಳ್ಳ ಶ್ರವಣಕುಮಾರ ಹಾಗೂ ರವಿಕುಮಾರ ಜನರಲ್ಲಿ ಮೌಢ್ಯತೆ ದೂರ ಮಾಡುವ ನಿಟ್ಟಿನಲ್ಲಿ ಒಂದಿಲ್ಲೊಂದು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ.





