ಅಮಿತ್ ಶಾ ಪ್ರಾಚಾರ್ಯರಾಗಿರುವ ಕಾಲೇಜಿನಲ್ಲಿ ಪ್ರಶಾಂತ್ ಕಿಶೋರ್ ಇನ್ನೂ ವಿದ್ಯಾರ್ಥಿ: ವಿಜಯ್ ವರ್ಗಿಯಾ

ಕೊಲ್ಕತ್ತಾ, ಜೂ.9: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರನ್ನು 2021ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ನಿಯೋಜಿಸಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ "ಪ್ರಶಾಂತ್ ಕಿಶೋರ್ ಅವರು ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರಿಂತ ದೊಡ್ಡ ತಂತ್ರಗಾರ ಅಲ್ಲ" ಎಂದು ಪ್ರತಿಕ್ರಿಯಿಸಿದೆ.
"ಬಂಗಾಳದ ಜನತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಮೇಲಿನ ವಿಶ್ವಾಸ ಕಳೆದುಕೊಂಡಿದ್ದಾರೆ. ಆದ್ದರಿಂದ ಯಾವ ಚುನಾವಣಾ ತಂತ್ರಗಾರರೂ ಇದನ್ನು ಬದಲಿಸಲಾಗದು" ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗಿಯಾ ಹೇಳಿಕೆ ನೀಡಿದ್ದಾರೆ.
"ಇದುವರೆಗಿನ ಚುನಾವಣಾ ತಂತ್ರಗಳನ್ನು ಗಮನಿಸಿದರೆ ಶಾ ಅವರು ಕಿಶೋರ್ ಗಿಂತ ಉತ್ತಮ ಚುನಾವಣಾ ತಂತ್ರಗಾರ. ಬಿಜೆಪಿ ಅಧ್ಯಕ್ಷರು ಈ ಕಾಲೇಜಿನ ಪ್ರಾಚಾರ್ಯರಾಗಿದ್ದರೆ ಪ್ರಶಾಂತ್ ಕಿಶೋರ್ ಇನ್ನೂ ಅಲ್ಲಿನ ವಿದ್ಯಾರ್ಥಿ" ಎಂದು ಪಶ್ಚಿಮ ಬಂಗಾಳದ ಬಿಜೆಪಿ ಉಸ್ತುವಾರಿ ಹೊಣೆ ಹೊಂದಿರುವ ಪ್ರಧಾನ ಕಾರ್ಯದರ್ಶಿ ವಿಜಯ್ ವರ್ಗಿಯಾ ಅಭಿಪ್ರಾಯಪಟ್ಟಿದ್ದಾರೆ.
2021ರ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಪ್ರಭಾವವನ್ನು ತಡೆಯಲು ಮಮತಾ ಬ್ಯಾನರ್ಜಿಯವರು ಪ್ರಶಾಂತ್ ಕಿಶೋರ್ ಅವರ ಮೊರೆ ಹೋಗಿದ್ದಾರೆ ಎನ್ನಲಾಗಿದ್ದು, ಗುರುವಾರ ಕಿಶೋರ್ ಅವರು ಮಮತಾ ಬ್ಯಾನರ್ಜಿಯವರನ್ನು ಭೇಟಿ ಮಾಡಿರುವುದು ಹಲವು ವದಂತಿಗಳಿಗೆ ಕಾರಣವಾಗಿದೆ.
"ಬಂಗಾಳದ ಜನತೆ ಮಮತಾ ಬ್ಯಾನರ್ಜಿ ಮೇಲಿನ ವಿಶ್ವಾಸ ಕಳೆದುಕೊಂಡಿದ್ದಾರೆ. ಬ್ಯಾನರ್ಜಿ ಹಾಗೂ ಟಿಎಂಸಿಯನ್ನು ಹೊರಗಟ್ಟಲು ನಿರ್ಧರಿಸಿದ್ದಾರೆ. ಇದೀಗ ಯಾವ ಚುನಾವಣಾ ತಂತ್ರಗಾರರು ಕೂಡಾ ಇದನ್ನು ಬದಲಿಸಲಾರರು" ಎಂದು ವಿಜಯ್ ವರ್ಗಿಯಾ ಅಭಿಪ್ರಾಯಪಟ್ಟಿದ್ದಾರೆ.