ಪತ್ರಕರ್ತರ ತಂಡದ ಮೇಲೆ ಬೈಕ್ ಸವಾರರಿಂದ ಗುಂಡು ಹಾರಾಟ

ಹೊಸದಿಲ್ಲಿ,ಜೂ.9: ರವಿವಾರ ದಿಲ್ಲಿಯ ಬಾರಾಪುಲಾ ಫ್ಲೈ ಓವರ್ನಲ್ಲಿ ಸಾಗುತ್ತಿದ್ದ,ಎಬಿಪಿ ನ್ಯೂಸ್ನ ಇಬ್ಬರು ಪತ್ರಕರ್ತರಿದ್ದ ವಾಹನದ ಮೇಲೆ ಬೈಕ್ನಲ್ಲಿದ್ದ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.
ಗುಂಡು ಕಾರಿಗೆ ಬಡಿದಿದೆಯಾದರೂ ಪತ್ರಕರ್ತರು ಗಾಯಗೊಳ್ಳದೆ ಪಾರಾಗಿದ್ದಾರೆ ಎಂದು ಹೆಚ್ಚುವರಿ ಡಿಸಿಪಿ ಪರವಿಂದರ್ ಸಿಂಗ್ ಅವರು ತಿಳಿಸಿದರು.
ದಿಲ್ಲಿಯ ಪ್ರಸಾದ ನಗರದಲ್ಲಿ ವ್ಯಾಪಾರಿಯೋರ್ವ ಕೊಲೆಯಾಗಿರುವ ಬಗ್ಗೆ ಮಾಹಿತಿ ಪಡೆದಿದ್ದ ವರದಿಗಾರ ಸಿದ್ಧಾರ್ಥ ಪುರೋಹಿತ ಮತ್ತು ಕ್ಯಾಮೆರಾಮನ್ ಅರವಿಂದ ಕುಮಾರ ಅವರು ಘಟನಾಸ್ಥಳಕ್ಕೆ ತೆರಳುತ್ತಿದ್ದರು. ಮಧ್ಯಾಹ್ನ 1:30ರ ಸುಮಾರಿಗೆ ಅವರ ವಾಹನವು ಪ್ರಗತಿ ಮೈದಾನ ಬಳಿ ತಲುಪಿದಾಗ ಬೈಕ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಪಿಸ್ತೂಲು ತೋರಿಸಿ ಅವರನ್ನು ನಿಲ್ಲಿಸಿದ್ದರು. ಕಾರನ್ನು ಪಕ್ಕದಲ್ಲಿ ಪಾರ್ಕ್ ಮಾಡುವಂತೆ ಸೂಚಿಸಿದ್ದರು. ಆದರೆ ಕಾರಿನ ಚಾಲಕ ಅದನ್ನು ಪಾಲಿಸದೆ ಮುಂದಕ್ಕೆ ಸಾಗಿದಾಗ ಅವರು ಮೂರು ಗುಂಡುಗಳನ್ನು ಹಾರಿಸಿದ್ದು,ಈ ಪೈಕಿ ಎರಡು ಗುಂಡುಗಳು ಕಾರಿಗೆ ಬಡಿದಿವೆ. ಸುಮಾರು ಅರ್ಧ ಕಿ.ಮೀ. ಕಾರನ್ನು ಹಿಂಬಾಲಿಸಿದ್ದ ದುಷ್ಕರ್ಮಿಗಳು ಬಳಿಕ ವಾಪಸಾದರು ಎಂದು ಎಬಿಪಿ ನ್ಯೂಸ್ ತಿಳಿಸಿದೆ.
ಐಎನ್ಎ ಮೆಟ್ರೋ ನಿಲ್ದಾಣದ ಬಳಿ ವಾಹನಗಳ ತಪಾಸಣೆ ನಡೆಸುತ್ತಿದ್ದ ಪೊಲೀಸರ ಬಳಿ ಪತ್ರಕರ್ತರು ದೂರಿಕೊಂಡಿದ್ದರೂ ಅದನ್ನು ಕಡೆಗಣಿಸಿದ ಆರೋಪದಲ್ಲಿ ಮೂವರು ಪೊಲಿಸರನ್ನು ಅಮಾನತುಗೊಳಿಸಲಾಗಿದೆ ಎಂದು ಸಿಂಗ್ ತಿಳಿಸಿದರು.