ನಾಪತ್ತೆಯಾಗಿರುವ ವಿಮಾನದ ಮಾಹಿತಿ ನೀಡಿದವರಿಗೆ 5 ಲ.ರೂ.ಬಹುಮಾನ

ಹೊಸದಿಲ್ಲಿ, ಜೂ.9: ಜೂ.3ರಂದು ಅಸ್ಸಾಮಿನ ಜೋರ್ಹಾಟ್ನಿಂದ ಪ್ರಯಾಣಿಸುತ್ತಿದ್ದಾಗ ಅರುಣಾಚಲ ಪ್ರದೇಶದಲ್ಲಿ ನಾಪತ್ತೆಯಾಗಿರುವ ಎಎನ್-32 ವಿಮಾನದ ಕುರಿತು ಮಾಹಿತಿಗಳನ್ನು ಒದಗಿಸುವವರಿಗೆ ಐದು ಲ.ರೂ.ಗಳ ನಗದು ಬಹುಮಾನವನ್ನು ನೀಡುವುದಾಗಿ ಭಾರತೀಯ ವಾಯುಪಡೆಯು ಪ್ರಕಟಿಸಿದೆ.
13 ಜನರಿದ್ದ ಈ ಸಾರಿಗೆ ವಿಮಾನವು ಅರುಣಾಚಲ ಪ್ರದೇಶದ ಚೀನಾ ಗಡಿ ಸಮೀಪದ ಮೆಚುಕಾಕ್ಕೆ ಪ್ರಯಾಣ ಆರಂಭಿಸಿದ 33 ನಿಮಿಷಗಳ ಬಳಿಕ ನಾಪತ್ತೆಯಾಗಿತ್ತು. ವಿಮಾನವನ್ನು ಪತ್ತೆ ಹಚ್ಚಲು ವಾಯುಪಡೆಯು ವ್ಯಾಪಕ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದ್ದರೂ ಈವರೆಗೆ ಯಾವುದೇ ಸುಳಿವು ದೊರಕಿಲ್ಲ.
ಏರ್ ಮಾರ್ಷಲ್ ಆರ್.ಡಿ ಮಾಥೂರ್ ಅವರು ವಿಮಾನದ ಪತ್ತೆಗೆ ನೆರವಾಗುವ ವಿಶ್ವಾಸಾರ್ಹ ಮಾಹಿತಿಯನ್ನು ನೀಡುವ ವ್ಯಕ್ತಿ/ವ್ಯಕ್ತಿಗಳು/ಗುಂಪಿಗೆ ಐದು ಲ.ರೂ.ಗಳ ಬಹುಮಾನವನ್ನು ಘೋಷಿಸಿದ್ದಾರೆ ಎಂದು ವಾಯುಪಡೆಯ ವಕ್ತಾರ ವಿಂಗ್ ಕಮಾಂಡರ್ ರತ್ನಾಕರ ಸಿಂಗ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಏರ್ ಚೀಫ್ ಮಾರ್ಷಲ್ ಬಿ.ಎಸ್.ಧನೋವಾ ಅವರು ಶನಿವಾರ ಜೋರ್ಹಾಟ್ ವಾಯುನೆಲೆಗೆ ಭೇಟಿ ನೀಡಿ, ಶೋಧ ಮತ್ತು ರಕ್ಷಣಾ ಕಾರ್ಯಚರಣೆಯ ಬಗ್ಗೆ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಶನಿವಾರ ಪ್ರತಿಕೂಲ ಹವಾಮಾನದಿಂದಾಗಿ ವೈಮಾನಿಕ ಶೋಧ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಆದರೆ ನೆಲದ ಮೇಲಿನ ತಂಡಗಳು ಕಾರ್ಯಾಚರಣೆಯನ್ನು ಮುಂದುವರಿಸಿವೆ. ದುರ್ಗಮ ಪ್ರದೇಶದ ಜೊತೆಗೆ ಪ್ರತಿಕೂಲ ಹವಾಮಾನವೂ ವೈಮಾನಿಕ ಶೋಧ ಕಾರ್ಯಾಚರಣೆಗೆ ಗಂಭೀರ ಸವಾಲುಗಳನ್ನು ಒಡ್ಡಿದೆ ಎಂದು ಸಿಂಗ್ ತಿಳಿಸಿದ್ದಾರೆ.