ದುಬೈ ಬಸ್ ದುರಂತ: 11 ಭಾರತೀಯರ ಪಾರ್ಥಿವ ಶರೀರ ಸ್ವದೇಶಕ್ಕೆ
ದುಬೈ,ಜೂ.9: ದುಬೈಯಲ್ಲಿ ಗುರುವಾರ ಸಂಭವಿಸಿದ ಭೀಕರ ರಸ್ತೆ ಅವಘಡದಲ್ಲಿ ಮೃತಪಟ್ಟ 11 ಭಾರತೀಯರ ಪಾರ್ಥಿವ ಶರೀರಗಳನ್ನು ರವಿವಾರ ಭಾರತಕ್ಕೆ ಕಳುಹಿಸಿಕೊಡಲಾಯಿತು. ಇನ್ನೋರ್ವ ಭಾರತೀಯ ಮಹಿಳೆಯ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಯುಎಇನಲ್ಲೇ ನೆರವೇರಿಸಲಾಯಿತೆಂದು ಅಧಿಕೃತ ಮೂಲಗಳು ತಿಳಿಸಿವೆ.
ಈದ್ ರಜೆಯ ಹಿನ್ನೆಲೆಯಲ್ಲಿ ಓಮನ್ನಿಂದ ಯುಎಇಗೆ ಪ್ರವಾಸಿಗರನ್ನು ಕರೆತರುತ್ತಿದ್ದ ಬಸ್ಸೊಂದು ನಿರ್ಬಂಧಿತ ಪ್ರದೇಶವನ್ನು ಪ್ರವೇಶಿಸಿ, ಸಂಚಾರ ಎಚ್ಚರಿಕೆ ಫಲಕವೊಂದಕ್ಕೆ ಡಿಕ್ಕಿ ಹೊಡೆದಿದಿದ್ದರಿಂದ ಸಂಭವಿಸಿದ ಅವಘಡದಲ್ಲಿ 12 ಮಂದಿ ಭಾರತೀಯರು ಸೇರಿದಂತೆ 17 ಮಂದಿ ಮೃತಪಟ್ಟಿದ್ದಾರೆ.
ಮೃತ ಭಾರತೀಯರ ಪಾರ್ಥಿವ ಶರೀರಗಳನ್ನು ನಿಗದಿತ ಸಮಯದಲ್ಲಿ ರವಾನಿಸಲಾಗಿದೆ. ಈ ಕುರಿತ ಪ್ರಕ್ರಿಯೆಗಳು ನಿನ್ನೆ ರಾತ್ರಿ 11:45 ರೊಳಗೆ ಪೂರ್ಣಗೊಂಡಿದ್ದವು’’ ಎಂದು ಮೃತದೇಹಗಳ ಸಾಗಣೆಗೆ ವಿಮಾನಗಳನ್ನು ಏರ್ಪಾಡು ಮಾಡುವ ಹೊಣೆ ಹೊತ್ತಿದ್ದ ಯುಎಇ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಮಧ್ಯೆ, ಬಸ್ ಅವಘಡದಲ್ಲಿ ಮೃತಪಟ್ಟ ಅನಿವಾಸಿ ಭಾರತೀಯ ಯುವತಿ ರೋಶನಿ ಮೂಲಚಂದಾನಿ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರವನ್ನು ಜೆಬೆಲ್ ಅಲಿ ಚಿತಾಗಾರದಲ್ಲಿ ನೆರವೇರಿಸಲಾಯಿತು.
ಭಾರತದಿಂದ ಆಗಮಿಸಿದ ಆಕೆಯ ಕುಟುಂಬಿಕರು ಅಂತ್ಯಸಂಸ್ಕಾರವನ್ನು ನೆರವೇರಿಸಿದರು ಎಂದು ಮೂಲಗಳು ತಿಳಿಸಿವೆ. ಮೃತ ಭಾರತೀಯರ ಪಾರ್ಥಿವ ಶರೀರಗಳ ಸಾಗಣೆಯ ವೆಚ್ಚವನ್ನು ಅವರು ಉದ್ಯೋಗದಲ್ಲಿದ್ದ ಸಂಸ್ಥೆಯ ಮಾಲಕರು ಭರಿಸದೆ ಇದ್ದಲ್ಲಿ ಏರ್ಇಂಡಿಯಾ, ಉಚಿತವಾಗಿ ಸಾಗಿಸಲಿದೆಯೆಂದು ದುಬೈನಲ್ಲಿನ ಭಾರತೀಯ ಕಾನ್ಸುಲ್ ಜನರಲ್ ವಿಪುಲ್ ಅವರು ತಿಳಿಸಿದ್ದಾರೆ.
ಮೃತರ ಪ್ರವಾಸ ದಾಖಲೆಗಳನ್ನು ಕೂಡಾ ಭಾರತೀಯ ರಾಯಭಾರಿ ಕಚೇರಿ ಉಚಿತವಾಗಿ ನೀಡಿದೆ ಹಾಗೂ ಅರ್ಥಿಕ ನೆರವಿನ ಅಗತ್ಯವಿರುವ ಕುಟುಂಬಗಳಿಗೆ ಶವಗಳ ನಿರ್ವಹಣಾ ವೆಚ್ಚವನ್ನು ತಾನೇ ಭರಿಸಿದೆ.
ಅಪಘಾತಕ್ಕೀಡಾದ ಬಸ್ ಒಮನ್ ಮೂಲದ ಸಾರಿಗೆ ಕಂಪೆನಿಯೊಂದಕ್ಕೆ ಸೇರಿದ್ದಾಗಿದೆ. 31 ಪ್ರಯಾಣಿಕರಿದ್ದ ಈ ಬಸ್, ಎಡಬದಿಯಲ್ಲಿದ್ದ ಎತ್ತರ ತಡೆಬೇಲಿಗೆ ಢಿಕ್ಕಿ ಹೊಡೆದಿತ್ತು. ಇದರಿಂದಾಗಿ ಆ ಭಾಗದಲ್ಲಿ ಕುಳಿತಿದ್ದ 17 ಪ್ರಯಾಣಿಕರು ದಾರುಣವಾಗಿ ಮೃತಪಟ್ಟರು.
ಬಸ್ ದುರಂತಕ್ಕೆ ಚಾಲಕನ ನಿರ್ಲಕ್ಷವೇ ಕಾರಣವೆಂದು ದುಬೈ ಪೊಲೀಸರು ಆರೋಪಿಸಿದ್ದಾರೆ. ಕೆಲವು ಸಂದರ್ಭಗಳಲ್ಲಿ ಸಣ್ಣ ಮಟ್ಟದ ನಿರ್ಲಕ್ಷ ಕೂಡಾ ಗಂಭೀರವಾದ ಪರಿಣಾಮಗಳಾಗಿ ಎಡೆಮಾಡಿಕೊಡುತ್ತದೆಯೆಂದು ಅವರು ಹೇಳಿದ್ದಾರೆ.