ಸಾಲದ ಹಣಕ್ಕಾಗಿ ಕೊಲೆಯತ್ನ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ
ಕುಂದಾಪುರ, ಜೂ.11: ಸಾಲದ ಹಣದ ವಿಚಾರದಲ್ಲಿ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣದ ಆರೋಪಿ ಗದಗದ ಯಲ್ಲಪ್ಪಎಂಬಾತನಿಗೆ ಕುಂದಾಪುರದ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾ ಲಯ ಜೀವಾವಧಿ ಶಿಕ್ಷೆ ವಿಧಿಸಿ ಇಂದು ತೀರ್ಪು ನೀಡಿದೆ.
2016ರ ಜು.10ರಂದು ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ವೆ ಗ್ರಾಮದ ಸೂರ್ಗೋಳಿ ಜಲ್ಲಿ ಕ್ರಷರ್ ಲೇಬರ್ ರೂಂನಲ್ಲಿ ಕಾರ್ಮಿಕ ರಾಜಕುಮಾರ್ ಹಾಗೂ ಯಲ್ಲಪ್ಪನಡುವೆ ಹಣಕಾಸು ವಿಚಾರದಲ್ಲಿ ಮಾತುಕತೆ ನಡೆದಿತ್ತು. ಈ ವೇಳೆ ಯಲ್ಲಪ್ಪ ಕತ್ತಿಯಿಂದ ರಾಜಕುಮಾರ್ ಅವರ ಕುತ್ತಿಗೆಗೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದನು.
ಈ ಬಗ್ಗೆ ಅಂದಿನ ಶಂಕರನಾರಾಯಣ ಎಸ್ಸೈ ಸುನೀಲ್ ಕುಮಾರ್ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಪ್ರಕಾಶ್ ಖಂಡೇರಿ ಜೂ.3ರಂದು ಆರೋಪಿಯನ್ನು ದೋಷಿ ಎಂಬುದಾಗಿ ಘೋಷಿಸಿ, ಶಿಕ್ಷೆಯ ಪ್ರಮಾಣವನ್ನು ಜೂ.11ರಂದು ಪ್ರಕಟಿಸುವು ದಾಗಿ ತಿಳಿಸಿದ್ದರು.
ಅದರಂತೆ ನ್ಯಾಯಾಧೀಶರು ಇಂದು ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಕಲಂ 326(ಗಂಭೀರ ಸ್ವರೂಪದ ಗಾಯ)ರಂತೆ ಎರಡು ವರ್ಷ ಜೈಲುಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿದರು. ಸಂತ್ರಸ್ತ ರಾಜಕುಮಾರ್ ಕಾನೂನು ಪ್ರಾಧಿಕಾರದ ಮೂಲಕ ಪರಿಹಾರವನ್ನು ಪಡೆದುಕೊಳ್ಳಬಹುದು ಎಂದು ನ್ಯಾಯಾಧೀಶರು ಸೂಚಿಸಿದರು. ಅಭಿಯೋಜನೆ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು.







