ಉಪ್ಪಿನಂಗಡಿ: ವಿದ್ಯುತ್ ಸ್ಪರ್ಶಿಸಿ ಲೈನ್ ಮ್ಯಾನ್ ಮೃತ್ಯು
ಉಪ್ಪಿನಂಗಡಿ: ವಿದ್ಯುತ್ ಪರಿವರ್ತಕದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಹರಿದು ಲೈನ್ ಮ್ಯಾನ್ ಮೃತಪಟ್ಟ ಘಟನೆ 34ನೇ ನೆಕ್ಕಿಲಾಡಿ ಸಮೀಪದ ಬೇರಿಕೆ ಎಂಬಲ್ಲಿ ಬುಧವಾರ ಸಂಜೆ ನಡೆದಿದೆ.
ಮೂಲತಃ ದಾವಣಗೆರೆ ನಿವಾಸಿ, ಉಪ್ಪಿನಂಗಡಿ ಮೆಸ್ಕಾಂ ಶಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮೀಟ್ಯಾ ನಾಯಕ್ (35) ಮೃತರು ಎಂದು ಗುರುತಿಸಲಾಗಿದೆ.
ಜೂ.12ರಂದು ಮೈನ್ ಲೈನ್ ದುರಸ್ತಿಯ ಹಿನ್ನೆಲೆಯಲ್ಲಿ ಬೇರಿಕೆಯ ಪೊಲೀಸ್ ವಸತಿ ಗೃಹದ ಬಳಿ ಲೈನ್ ಆಫ್ ಮಾಡಲಾಗಿತ್ತು. ದುರಸ್ತಿ ಬಳಿಕ ಲೈನ್ ಆನ್ ಮಾಡಲು ವಿದ್ಯುತ್ ಪರಿವರ್ತಕದ ಬಳಿ ಬಂದ ಅವರು ವಿದ್ಯುತ್ ಪರಿವರ್ತಕದಲ್ಲಿ ಚಾಲನೆ ಕೊಡುತ್ತಿದ್ದಂತೆಯೇ ಅವರ ಮೇಲೆ ವಿದ್ಯುತ್ ಹರಿದಿದ್ದು, ಈ ಸಂದರ್ಭ ಅಲ್ಲಿಯೇ ಕುಸಿದು ಬಿದ್ದು ಅಸ್ವಸ್ಥಗೊಂಡರು. ತಕ್ಷಣ ಸ್ಥಳೀಯರು ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದಿದ್ದರೂ ಮಿಟ್ಯಾ ನಾಯಕ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆಯಷ್ಟೇ ಮೆಸ್ಕಾಂನ ಉಪ್ಪಿನಂಗಡಿ ಶಾಖೆಗೆ ವರ್ಗಾವಣೆಯಾಗಿದ್ದ ಅವರು ಸವಣೂರಿನಲ್ಲಿ ವಾಸ್ತವ್ಯವಿದ್ದು, ದಿನಾ ಅಲ್ಲಿಂದ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.