ವಂದೇಮಾತರಂ ಹಾಡಲು ರಾಷ್ಟ್ರಗೀತೆಯನ್ನು ಅರ್ಧಕ್ಕೆ ನಿಲ್ಲಿಸಿದರು!

ಇಂಧೋರ್, ಜೂ.13: ವಂದೇ ಮಾತರಂ ಹಾಡುವ ಸಲುವಾಗಿ ಸದಸ್ಯರು ಹಾಡುತ್ತಿದ್ದ ರಾಷ್ಟ್ರಗೀತೆಯನ್ನು ಅರ್ಧಕ್ಕೇ ನಿಲ್ಲಿಸಿದ ಘಟನೆ ಬಿಜೆಪಿ ಬೆಂಬಲಿತ ಆಡಳಿತ ಇರುವ ಇಂಧೋರ್ ಮಹಾನಗರ ಪಾಲಿಕೆಯಲ್ಲಿ ಬುಧವಾರ ಕೆಲ ಕಾಲ ಗೊಂದಲಕ್ಕೆ ಕಾರಣವಾಯಿತು.
ಈ ಘಟನೆಯ ವೀಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೇಯರ್ ಮಾಲಿನಿ ಗೌಡ್ ಹಾಗೂ ಸ್ಥಳೀಯ ಬಿಜೆಪಿ ಶಾಸಕರೊಬ್ಬರೂ ವೀಡಿಯೊದಲ್ಲಿ ಕಾಣುತ್ತಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಇಂಧೋರ್ ಮಹಾನಗರ ಪಾಲಿಕೆಯ ಬಜೆಟ್ ಅಧಿವೇಶನದಲ್ಲಿ ಹಾಜರಿದ್ದ ಸದಸ್ಯರು ರಾಷ್ಟ್ರಗೀತೆ ಹಾಡಿದರು. ಅದರೆ ಕೆಲವೇ ಸೆಕೆಂಡ್ಗಳಲ್ಲಿ ಕೆಲ ಸದಸ್ಯರು ರಾಷ್ಟ್ರಗೀತೆಯನ್ನು ಅರ್ಧಕ್ಕೆ ನಿಲ್ಲಿಸಿ, ವಂದೇ ಮಾತರಂ ಹಾಡಲು ಅರಂಭಿಸಿ, ಕೊನೆಯವರೆಗೂ ಹಾಡಿದರು.
ರಾಷ್ಟ್ರಗೀತೆಯನ್ನು ಅವಮಾನಿಸಿದ್ದಕ್ಕಾಗಿ ಅಂಥ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ. ಈ ಬಗ್ಗೆ ಪಾಲಿಕೆ ಅಧ್ಯಕ್ಷ ಅಜಯ್ ಸಿಂಗ್ ನರೂಕಾ ಅವರನ್ನು ಸಂಪರ್ಕಿಸಿದಾಗ, "ಬಾಯ್ತಪ್ಪಿನಿಂದ ಬಹುಶಃ ಹಾಡಿರಬೇಕು. ಇದರಲ್ಲಿ ಯಾವುದೇ ದುರುದ್ದೇಶ ಇದ್ದಿರಲಾರದು. ಅನಗತ್ಯವಾಗಿ ಇದನ್ನು ದೊಡ್ಡದು ಮಾಡುವ ಅಗತ್ಯವಿಲ್ಲ" ಎಂದು ಹೇಳಿದರು.
ರಾಷ್ಟ್ರಗೀತೆ ಹಾಡಲು ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿದರೆ ಅಥವಾ ನಿಲ್ಲಿಸಿದರೆ ಮೂರು ವರ್ಷಗಳ ಜೈಲುಶಿಕ್ಷೆ ವಿಧಿಸಲಾಗುತ್ತದೆ ಎಂದು ಉನ್ನತ ಮೂಲಗಳು ಹೇಳಿವೆ.