ಮುಖ್ಯಮಂತ್ರಿ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಶಾಸಕ
ಆಂಧ್ರಪ್ರದೇಶದಲ್ಲಿ ನಡೆದ ವಿದ್ಯಮಾನ

ಜಗನ್ಮೋಹನ್ ರೆಡ್ಡಿ,ಶ್ರೀಧರ ರೆಡ್ಡಿ
ವಿಜಯವಾಡ. ಜೂ.13: ಆಂಧ್ರಪ್ರದೇಶದ ನೂತನ ಶಾಸಕನೊಬ್ಬ ದೇವರ ಬದಲಿಗೆ ಮುಖ್ಯಮಂತ್ರಿ ಹಾಗೂ ವೈಎಸ್ಆರ್ಸಿಪಿ ವರಿಷ್ಠ ಜಗನ್ಮೋಹನ್ ರೆಡ್ಡಿ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಬಹುಶಃ ಇತ್ತೀಚೆಗಿನ ವರ್ಷಗಳಲ್ಲಿ ನಡೆದ ಅಪರೂಪದ ಘಟನೆ ಇದಾಗಿದೆ.
ನೆಲ್ಲೂರ್ ಗ್ರಾಮೀಣ ಕ್ಷೇತ್ರದ ಶಾಸಕ ಕೆ.ಶ್ರೀಧರ ರೆಡ್ಡಿ ಜಗನ್ಗೆ ತನ್ನ ನಿಷ್ಠೆಯನ್ನ ತೋರಿಸುವ ಮೂಲಕ ಅಸಾಮಾನ್ಯ ಹೆಜ್ಜೆ ಇಟ್ಟಿದ್ದಾರೆ.
ಹಂಗಾಮಿ ಸ್ಪೀಕರ್ ಸಂಬಂಗಿ ಅಪ್ಪಲ ನಾಯ್ಡು, ತಕ್ಷಣವೇ ಶಾಸಕ ರೆಡ್ಡಿಗೆ ಮತ್ತೊಮ್ಮೆ ಪ್ರಮಾಣವಚನ ಸ್ವೀಕರಿಸಲು ಸೂಚಿಸಿದರು. ಆಗ ಅವರು ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು.
‘‘ನಾನು ಬಡ ಕುಟುಂಬದಿಂದ ಬಂದಿದ್ದೇನೆ. ರಾಜಕೀಯ ಹಾಗೂ ಆರ್ಥಿಕ ಹಿನ್ನೆಲೆ ನನಗಿಲ್ಲ. ಜಗನ್ ನನ್ನನ್ನು ಎರಡು ಬಾರಿ ಶಾಸಕರನ್ನಾಗಿ ಮಾಡಿದರು. ಅವರೊಂದಿಗೆ ನನಗೆ ಭಾವನಾತ್ಮಕ ಸಂಬಂಧವಿದೆ. ನಾನು ಅವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸುವುದನ್ನು ಬಿಟ್ಟು ಬೇರೇನೋ ಬಯಸುವುದಿಲ್ಲ. ಕಳೆದ ಐದು ವರ್ಷಗಳಿಂದ ಶಾಸಕನಾಗಿ ನನಗೆ ಬರುತ್ತಿರುವ ಸಂಭಾವನೆಯನ್ನು ಬಡ ವಿದ್ಯಾರ್ಥಿಗಳಿಗೆ ದಾನ ನೀಡುತ್ತಿದ್ದೇನೆ ಎಂದು ರೆಡ್ಡಿ ಹೇಳಿದ್ದಾರೆ.