ಕುಸಿಯುವ ಭೀತಿಯಲ್ಲಿದ್ದ ಪಾಣೆಮಂಗಳೂರು ಹಾಸ್ಟೇಲ್: ವಿದ್ಯಾರ್ಥಿಗಳು ಸ್ಥಳಾಂತರ

ಬಂಟ್ವಾಳ, ಜೂ. 13: ಕುಸಿಯುವ ಭೀತಿಯಲ್ಲಿದ್ದ ಪಾಣೆಮಂಗಳೂರಿನ ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ವಾಸ್ತವ್ಯವಿದ್ದ 15 ಮಕ್ಕಳನ್ನು ಮೊಗರ್ನಾಡುವಿನ ಹೊಸ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.
1977ರಿಂದ ಪಾಣೆಮಂಗಳೂರಿನ ಬಂಗ್ಲೆಗುಡ್ಡೆಯ ಪುರಸಭೆಯ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ವಸತಿ ನಿಲಯ ಕಳೆದ ಕೆಲವು ವರ್ಷಗಳಿಂದ ಶಿಥಿಲಾವಸ್ಥೆಗೆ ತಲುಪಿದ್ದ ಬಗ್ಗೆ ಮಾಧ್ಯಮಗಳಲ್ಲಿಯೂ ವರದಿಗಳಾಗಿತ್ತು. ಆದರೆ, ಈ ಕಟ್ಟಡ 1889ರಲ್ಲಿ ನಿರ್ಮಾಣಗೊಂಡಿದ್ದು, ಈ ಕಟ್ಟಡ ಬಂಟ್ವಾಳ ಪುರಸಭೆಯ ಅಧೀನದಲ್ಲಿತ್ತು. 1977ರಲ್ಲಿ ನಿಗದಿಯಾಗಿದ್ದ ಮಾಸಿಕ ಬಾಡಿಗೆ 300 ರೂ. ಅನ್ನೇ ಇಲಾಖೆ ಕಳೆದ ತಿಂಗಳವರೆಗೂ ಪುರಸಭೆಗೆ ಪಾವತಿಸುತ್ತಿತ್ತು. ಕಡಿಮೆ ಬಾಡಿಗೆಯ ಕಾರಣಕ್ಕೆ ಪುರಸಭೆಯೂ ಈ ಕಟ್ಟಡ ದುರಸ್ಥಿ ಕಡೆಗೆ ನಿಗಾವಹಿಸಿರಲಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಗುರುವಾರ ಬೆಳಿಗ್ಗೆ ಹಾಸ್ಟೆಲ್ನಲ್ಲಿದ್ದ ಕಪಾಟುಗಳನ್ನು ಅಡಿಗೆ ಸಾಮಾಗ್ರಿಗಳನ್ನು ಕೂಡ ಸ್ಥಳಾಂತರಿಸಲಾಗಿದ್ದು, ಮಕ್ಕಳಿಗೆ ತಕ್ಕ ಮಟ್ಟಿಗೆ ಭದ್ರತೆ ದೊರೆತಂತಾಗಿದೆ. ಈ ಹಾಸ್ಟೆಲ್ನಲ್ಲಿ 35 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಕಳೆದ ವರ್ಷದ ಪುರಾವರ್ತಿತ 15 ವಿದ್ಯಾರ್ಥಿಗಳು ಸದ್ಯಕ್ಕೆ ಈ ಹಾಸೆಲ್ನಲ್ಲಿದ್ದು, ಉಳಿದ 20 ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ಇನ್ನಷ್ಟೇ ನಡೆಯಬೇಕಿದೆ ಎಂದು ಇಲಾಖಾ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಕಳಚಿ ಬಿದ್ದ ಫ್ಯಾನ್ ತಪ್ಪಿದ ಅನಾಹುತ
ಈ ಹಾಸ್ಟೆಲ್ ಕಟ್ಟಡದ ಕೊಠಡಿಯೊಂದರ ಮೇಲ್ಛಾಚಣಿ ಕುಸಿದು ಫ್ಯಾನ್ ಏಕಾಏಕಿ ಕಳಚಿ ಬಿದ್ದಿದ್ದು, ಅದೃಷ್ಟವಷಾತ್ ಯಾವುದೇ ಅಪಾಯ ಸಂಭವಿಸಿಲ್ಲ.
ಬುಧವಾರ ಮಕ್ಕಳು ಶಾಲೆಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಮಾಹಿತಿ ತಿಳಿದ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಈಗಾಗಲೇ ನಿಗದಿಪಡಿಸಿದ್ದ ಹೊಸ ಬಾಡಿಗೆ ಕಟ್ಟಡಕ್ಕೆ ಹಾಸ್ಟೆಲ್ನಲ್ಲಿದ್ದ ಮಕ್ಕಳನ್ನು ಸ್ಥಳಾಂತರಿಸಿದ್ದಾರೆ.
ಹಾಸ್ಟೆಲ್ ಮೇಲ್ಛಾವಣಿ ಕುಸಿಯುವವರೆಗೂ ಮಕ್ಕಳನ್ನು ಇಲ್ಲಿಯೇ ವಾಸ್ತವ್ಯ ಹೂಡಿಸಿದ್ದು ಆತಂಕಕಾರಿ ವಿಷಯವಾಗಿದೆ. ಘಟನೆಯ ಬಳಿಕ ಮಕ್ಕಳಿಗೆ ಇಲಾಖೆಯು ಈಗಾಗಲೇ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದೆ. ಹಳೆ ಹಾಸ್ಟೆಲ್ ಪಕ್ಕದಲ್ಲಿ ಇಲ್ಲಿನ ಬಾಲಕರಿಗಾಗಿ ನಿರ್ಮಿಸಿದ ಹೊಸ ಕಟ್ಟಡದಲ್ಲಿ ಮೆಟ್ರಿಕ್ ಪೂರ್ವ ಬಾಲಕಿಯರಿಗೆ ವಸತಿ ವ್ಯವಸ್ಥೆ ಮಾಡಿದ್ದು, ಬಾಲಕರು ಮತ್ತೆ ವಾಸ್ತವ್ಯ ವಂಚಿತರಾಗಿದ್ದಾರೆ. ಇದರಿಂದ ಇಲ್ಲಿರುವ ಬಾಲಕಿಯರಿಗೆ ವಸತಿ ನಿಲಯಕ್ಕೆ ಹೊಸ ಕಟ್ಟಡವನ್ನು ಶೀಘ್ರ ಮಂಜೂರುಗೊಳಿಸಿ, ಈಗಾಗಲೇ ನಿಗದಿಯಾಗಿರುವ ಹೊಸ ಹಾಸ್ಟೆಲ್ನಲ್ಲಿ ಬಾಲಕರ ವಸತಿಗೆ ವ್ಯವಸ್ಥೆ ಕಲ್ಪಿಸಿಕೊಡುವಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮನವಿ ಮಾಡಲಾಗುವುದು.
-ಅಬ್ದುಲ್ಲಾ ಮಾಝಿನ್,
ಸಿಎಫ್ಐ ಬಂಟ್ವಾಳ ತಾಲೂಕು ಅಧ್ಯಕ್ಷ






.jpg)
.jpg)

