ಲೋಕಸಭೆಯಲ್ಲಿ ಪ್ರಮಾಣವಚನ ವೇಳೆ ಪ್ರಜ್ಞಾ ಸಿಂಗ್ ವಿವಾದ

ಹೊಸದಿಲ್ಲಿ, ಜೂ.16: 17ನೇ ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ತನ್ನ ಹೆಸರಿನೊಂದಿಗೆ ತನ್ನ ಆಧ್ಯಾತ್ಮ ಗುರುವಿನ ಹೆಸರನ್ನು ಸೇರಿಸುವ ಮೂಲಕ ಮಧ್ಯ ಪ್ರದೇಶದ ಬೋಪಾಲ್ನ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಸೋಮವಾರ ಸದನದಲ್ಲಿ ವಿಪಕ್ಷಗಳ ಟೀಕೆ ಹಾಗೂ ವಿರೋಧಕ್ಕೆ ಒಳಗಾದರು.
“ಈ ವೇಳೆ ಮಾತನಾಡಿದ ಠಾಕೂರ್, ಇದು ನನ್ನ ಪೂರ್ಣ ಹೆಸರಾಗಿದ್ದು ಈಗಾಗಲೇ ಪ್ರತಿಜ್ಞಾ ವಿಧಿಗಾಗಿ ನೀಡಲಾಗುವ ಅರ್ಜಿಯಲ್ಲಿ ಅದೇ ಹೆಸರನ್ನು ನೀಡಿರುವುದಾಗಿ” ಸ್ಪಷ್ಟನೆ ನೀಡಿದರು. ತನ್ನ ಹೆಸರು ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಜೊತೆಗೆ ಸ್ವಾಮಿ ಪೂರ್ಣ ಚೇತನಾನಂದ ಅವಧೇಶಾನಂದ ಗಿರಿ ಹೆಸರನ್ನು ಸೇರಿಸಿದ ಸಂಸದೆಯ ಕ್ರಮಕ್ಕೆ ಅವಕಾಶವಿಲ್ಲ ಎಂದು ವಿರೋಧ ಪಕ್ಷದ ಸದಸ್ಯರು ತಿಳಿಸಿದರು.
‘ಇದು ನನ್ನ ಪೂರ್ಣ ಹೆಸರು” ಎಂದು ಆಕೆ ತಿಳಿಸಿದಾಗ ವಿಪಕ್ಷ ನಾಯಕರು ಕುಳಿತಲ್ಲೇ ಘೋಷಣೆಗಳನ್ನು ಕೂಗುತ್ತಾ ಸದನದಲ್ಲಿ ಗದ್ದಲವೆಬ್ಬಿಸಿದರು. ಈ ವೇಳೆ, ಆಕೆಯ ಚುನಾವಣಾ ಪ್ರಮಾಣ ಪತ್ರದಲ್ಲಿ ನಮೂದಿಸಲಾಗಿರುವ ಹೆಸರನ್ನಷ್ಟೇ ದಾಖಲಿಸಲಾಗುತ್ತದೆ ಎಂದು ಲೋಕಸಭೆಯ ಹಂಗಾಮಿ ಸ್ಪೀಕರ್ ವೀರೇಂದ್ರ ಕುಮಾರ್ ತಿಳಿಸಿದರು. ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಪ್ರಜ್ಞಾ ಸಿಂಗ್ ಕೊನೆಯಲ್ಲಿ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಿದರು.