ಐಎಂಎ ವಂಚನೆ ಪ್ರಕರಣ: ಉಡುಪಿಯಲ್ಲಿ ಪ್ರಕರಣ ದಾಖಲು
ಉಡುಪಿ, ಜೂ.18: ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಪ್ರಕರಣವು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕೆಮ್ಮಣ್ಣು ತೋನ್ಸೆಯ ಇಸ್ಮಾಯೀಲ್ ಎಂಬವರ ಪತ್ನಿ ಎಸ್.ಕೆ.ನಾಹಿದಾ (30) ಎಂಬವರು ಬೆಂಗಳೂರಿನ ಐಎಂಎ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯಲ್ಲಿ ಹಣ ಹೂಡಿಕೆ ಮಾಡಿದಲ್ಲಿ ಅಸಲು ಮೊತ್ತದ ಜೊತೆ ತಿಂಗಳಿಗೆ 3.1% ಬಡ್ಡಿ/ಲಾಭಾಂಶ ನೀಡುವುದಾಗಿ ಸಂಬಂಧಿಕರಿಂದ ತಿಳಿದುಕೊಂಡಿದ್ದರು. ಅದರಂತೆ ಅವರು 2018ರ ಡಿ.21ರಂದು ಪಾಲು ಬಂಡವಾಳದ(ಶೇರ್) ಮೊತ್ತ 1,000 ರೂ. ಹಾಗೂ ಡೆಪೋಸಿಟ್ ಆಗಿ 30,000 ರೂ. ಮತ್ತು 20,000 ರೂ.ವನ್ನು ನೆಫ್ಟ್ ಮೂಲಕ ಹೂಡಿಕೆ ಮಾಡಿದ್ದು, ಈ ಬಗ್ಗೆ ಶೇರ್ ಸರ್ಟಿಫಿಕೇಟ್ ಮತ್ತು ಪಾಸ್ಬುಕ್ ಅಂಚೆ ಮೂಲಕ ಬಂದಿತ್ತು. ಅಲ್ಲದೇ 2019ರ ಜ.31 ರಂದು 1,250ರೂ. ಹಾಗೂ 2019ರ ಫೆ.28ರಂದು 1,278.13 ಬಡ್ಡಿ/ಲಾಭಾಂಶ ಜಮೆ ಆಗಿತ್ತು. ಆದರೆ ನಂತರದ ದಿನಗಳಲ್ಲಿ ಆರೋಪಿ ಸೊಸೈಟಿಯ ಸಿಇಒ ಮನ್ಸೂರ್ ಖಾನ್ ಮತ್ತು ನಿರ್ದೇಶಕರು ಯಾವುದೇ ಬಡ್ಡಿ/ಲಾಭಾಂಶ ನೀಡದೇ ಮತ್ತು ಅಸಲು ಹೂಡಿಕೆಯ ಹಣ ಹಿಂದಿರುಗಿಸದೆ ಮೋಸ ಮಾಡಿರುವುದಾಗಿ ಎಸ್.ಕೆ. ನಾಹಿದಾ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಇವರ ದೂರಿನಂತೆ ಠಾಣೆಯಲ್ಲಿ ಕಲಂ: 406, 420 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.