ಜೂ. 22: ಪಡುಬಿದ್ರಿಯಲ್ಲಿ 'ಬಿರ್ದ್' ಉದ್ಘಾಟನೆ

ಪಡುಬಿದ್ರಿ: ಪಡುಬಿದ್ರಿ ಬಂಟರ ಯಾನೆ ನಾಡವರ ಸಂಘದ ವತಿಯಿಂದ ಜೂನ್ 22ರಂದು ಸರಣಿ ಸಾಂಸ್ಕೃತಿಕ ಕಾರ್ಯಕ್ರಮಗಳ ಹಬ್ಬ `ಬಿರ್ದ್'ಗೆ ಚಾಲನೆ ನೀಡಲಾಗುವುದು ಎಂದು ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ಪಡುಬಿದ್ರಿಯ ಬಂಟರ ಭವನದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮೋಹನ್ ಆಳ್ವ ಚಾಲನೆಯನ್ನು ನೀಡಲಿದ್ದಾರೆ.
ಜೂ. 22ರಂದು ಸಂಜೆ 4-30ರಿಂದ ನಿಹಾಲಿ ರೈ, ಮಂಗಳೂರು ಇವರಿಂದ ನೃತ್ಯ ವೈವಿಧ್ಯ, ಸಂಜೆ 5ಗಂಟೆಗೆ ಪಟ್ಲ ಸತೀಶ್ ಶೆಟ್ಟಿ ಹಾಗೂ ಕಾವ್ಯಶ್ರೀ ಅಜೇರು ದ್ವಂದ್ವ ಗಾಯನದೊಂದಿಗೆ `ಭೀಷ್ಮ ವಿಜಯ' ತಾಳಮದ್ದಲೆ ಕೂಟ, ಸಂಜೆ 6ಗಂಟೆಗೆ ನಡೆಯುವ `ಬಿರ್ದ್'ನ ಉದ್ಘಾಟನಾ ಸಮಾರಂಭದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಮುಖ್ಯ ಅತಿಥಿಗಳಾಗಿರುವರು. ವಿಶ್ವ ಬಂಟರ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಭಾಗವತ, ಯಕ್ಷಧ್ರುವ ಫೌಂಡೇಶನ್ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರನ್ನು ಸಮ್ಮಾನಿಸಲಾಗುವುದು.
ಮುಂಬೈ ಉದ್ಯಮಿ ಮಹೇಶ್ ಶೆಟ್ಟಿ ತೆಳ್ಳಾರು, ಎರ್ಮಾಳು ಶಶಿಧರ ಶೆಟ್ಟಿ ಹಾಗೂ ಸಾಂತೂರು ಭಾಸ್ಕರ ಶೆಟ್ಟಿ ಭಾಗವಹಿಸುವರು. ಇದೇ ಸಮಾರಂಭದಲ್ಲಿ ಸಂಶೋಧನಾತ್ಮಕ `ಪುರಾತನ ತುಳು ನಾಡಿನ ಜನಾಂಗಗಳು, ಹಿನ್ನೆಲೆ ಮತ್ತು ಸಂಬಂಧ'ಗಳನ್ನೊಳಗೊಂಡ ಕೃತಿಯ ಅನಾವರಣ ಗೈಯ್ಯಲಾಗುವುದು ಎಂದರು.
ಸಂಘದ ವಿವಿಧ ಕಾರ್ಯಕ್ರಮಗಳು: ಸಂಘವು ಕೇವಲ ಉಳ್ಳವರ ಕೈಯಲ್ಲಿರದೇ ಸಮಾಜದ ಕೊನೆಯ ವ್ಯಕ್ತಿಯನ್ನೂ ತಲುಪಬೇಕೆಂಬ ಆಶಯದೊಂದಿಗೆ ಗ್ರಾಮ ಸಭೆಗಳಿಗೆ ಈಗಾಗಲೇ ಚಾಲನೆಯನ್ನು ನೀಡಲಾಗಿದೆ. ಅಶಕ್ತರು, ಅಂಗವಿಕಲರು, ವಿಧವೆಯರು ಮುಂತಾದವರಿಗೆ ಮಾಸಾಶನವನ್ನು ನೀಡುವುದಲ್ಲದೇ ಅವರೂ ಸಮಾಜದ ಮುಖ್ಯ ವಾಹಿನಿಯನ್ನು ಸೇರುವಂತಾಗಬೇಕು. ಹಾಗಾಗಿ ಅವರನ್ನು ತಲುಪುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಶಿಕ್ಷಣ ಕ್ಷೇತ್ರಕ್ಕೆ ಸಂಘವು ದಾಪುಗಾಲನ್ನಿಡುವ ಮತ್ತು ಧಾರ್ಮಿಕ ಶ್ರದ್ಧೆಯನ್ನು ಸಮಾಜ ಬಾಂಧವರಲ್ಲಿ ಆಳವಾಗಿರಿಸುವ ದೃಷ್ಟಿಯಿಂದ ಪ್ರತೀ ತಿಂಗಳ ಮೊದಲ ಮಂಗಳವಾರ ಸಂಜೆ ಸಾರ್ವಜನಿಕ ಸತ್ಯನಾರಾಯಣ ಪೂಜೆಯನ್ನೂ ನಡೆಸಲಾಗುತ್ತದೆ ಎಂದರು.
ಪಡುಬಿದ್ರಿ ಬಂಟರ ಸಂಘವು ಕಟ್ಟ ಕಡೆಯ ವ್ಯಕ್ತಿಯನ್ನೂ ತಲುಪುವ ಉದ್ದೇಶದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇನ್ನ ಉದಯ ಕುಮಾರ ಶೆಟ್ಟಿ ಅವರ ಸಂಚಾಲಕತ್ವದಲ್ಲಿ ಸಾಂಸ್ಕøತಿಕ ಚಟುವಟಿಕೆಗಳಿಗೆ ಚಾಲನೆಯನ್ನು ನೀಡಲಾಗುತ್ತಿದೆ ಎಂದರು.
ಪಡುಬಿದ್ರಿ ಬಂಟರ ಸಂಘದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾ„ಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಇನ್ನ ಉದಯ ಕುಮಾರ್ ಶೆಟ್ಟಿ, ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಶೋಭಾ ಜಗದೀಶ್ ಶೆಟ್ಟಿ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.







