ತೊಕ್ಕೊಟ್ಟಿನಲ್ಲಿ ದಂಪತಿ ಆತ್ಮಹತ್ಯೆ: ಕೊಳೆತ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆ
ಉಳ್ಳಾಲ: ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆ ಬಳಿ ಮನೆಯೊಳಗಡೆ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಚೆಂಬುಗುಡ್ಡೆ ಹಿಂದೂ ರುದ್ರಭೂಮಿಯ ಬಳಿ ನಿವಾಸಿಗಳಾದ ಪದ್ಮನಾಭ (78) ಮತ್ತು ಅವರ ಪತ್ನಿ ವಿಮಲಾ (65) ಎಂದು ಗುರುತಿಸಲಾಗಿದೆ.
ಮೃತರಿಗೆ ಮೂವರು ಮಕ್ಕಳಿದ್ದು ಎಲ್ಲರೂ ವಿವಾಹಿತರಾಗಿದ್ದು ಬೇರೆಯೇ ವಾಸವಾಗಿದ್ದಾರೆನ್ನಲಾಗಿದೆ. ಬುಧವಾರ ಮಧ್ಯಾಹ್ನ ಪದ್ಮನಾಭರ ಅಳಿಯ ಉಮಾನಾಥ್ ಅವರು ಚೆಂಬುಗುಡ್ಡೆಯ ಮಾವನ ಮನೆಗೆ ಬಂದಿದ್ದು, ಬಾಗಿಲು ಬಡಿದಾಗ ಯಾರೂ ಬಾಗಿಲು ತೆರೆಯಲಿಲ್ಲ, ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದುದು ಉಮಾನಾಥ್ ಅವರಿಗೆ ಅನುಮಾನ ಬರುವಂತೆ ಮಾಡಿದೆ. ಅಲ್ಲದೆ ಮನೆಯ ಒಳಗಿನಿಂದ ದುರ್ನಾತ ಬಂದಿದ್ದು, ನೊಣಗಳು ಓಡಾಡೋದನ್ನು ಕಂಡಾಗ ಉಮಾನಾಥ್ ಅವರು ಸ್ಥಳೀಯರ ಸಹಕಾರದಿಂದ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ಮನೆಯ ಬಾಗಿಲು ಒಡೆದು ಒಳಗೆ ಪ್ರವೇಶಿಸಿದ್ದು ಅಡುಗೆ ಕೋಣೆಯಲ್ಲಿ ಪದ್ಮನಾಭ್ ಮತ್ತು ವಿಮಲ ದಂಪತಿಯ ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿವೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.