ಐಎಂಎ ಬಹುಕೋಟಿ ವಂಚನೆ ಪ್ರಕರಣ: ಐವರು ನಿರ್ದೇಶಕರು ಎಸ್ಐಟಿ ವಶಕ್ಕೆ

ಬೆಂಗಳೂರು, ಜೂ.21: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ತನಿಖೆ ಮುಂದುವರೆಸಿರುವ ಸಿಟ್(ಎಸ್ಐಟಿ) ತನಿಖಾಧಿಕಾರಿಗಳು, ಐವರು ನಿರ್ದೇಶಕರನ್ನು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.
ಶಿವಾಜಿನಗರ ನಿವಾಸಿ ಶಾದಬ್ ಅಹ್ಮದ್(28), ಇಸ್ರಾರ್ ಅಹ್ಮದ್(32), ಪುಸೈಲ್ ಅಹ್ಮದ್(30), ಮುಹಮ್ಮದ್ ಇದ್ರೀಸ್(30) ಹಾಗೂ ಉಸ್ಮಾನ್(33) ಎಂಬುವರು ಸಿಟ್ ವಶಕ್ಕೆ ಪಡೆದಿರುವ ನಿರ್ದೇಶಕರು.
ಪ್ರಕರಣ ಸಂಬಂಧ ಈಗಾಗಲೇ 13 ಆರೋಪಿಗಳನ್ನು ಬಂಧಿಸಿರುವ ಸಿಟ್, ಆರೋಪಿ ಮನ್ಸೂರ್ ಹಾಗೂ ಆತನ ಜೊತೆ ಗುರುತಿಸಿಕೊಂಡಿದ್ದ ವ್ಯಕ್ತಿಗಳ ಆಸ್ತಿ ಮೌಲ್ಯದ ಕುರಿತು ಪರಿಶೀಲನೆ ನಡೆಸುತ್ತಿದೆ.
24ಕ್ಕೆ ಹಾಜರಾಗಿ: ಐಎಂಎ ವ್ಯವಸ್ಥಾಪಕ ಮನ್ಸೂರ್ಗೆ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿಗೊಳಿಸಿದ್ದು, ಇದೇ ತಿಂಗಳ 24ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಜೊತೆಗೆ, ಈ.ಡಿ. ಸಮನ್ಸ್ ಅನ್ನು ಐಎಂಎ ಕಚೇರಿ ಬಾಗಿಲಿಗೆ ಅಂಟಿಸಿದೆ.
Next Story





