ಡಾ. ಕಸ್ತೂರಿರಂಗನ್ ವರದಿಯನ್ನು ಹೆಚ್ಚು ಅಧ್ಯಯನ ಮಾಡಬೇಕಾಗಿದೆ: ಕೂಡಿಗೆ ಪ್ರಕಾಶ್ ಶೆಣೈ
ಬಂಟ್ವಾಳ, ಜೂ. 22: ಕಾಲದ ಬದಲಾವಣೆಗೆ ಅನುಗುಣವಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಚಲನಶೀಲತೆಯನ್ನು ಕಾಣುವುದು ಅದರ ನೈಜ ಮನೋಧರ್ಮ. ಈ ದೃಷ್ಟಿಯಿಂದ ನೂತನ ಶಿಕ್ಷಣ ವ್ಯವಸ್ಥೆಗೆ ಸಂಬಂಧಿಸಿದಂತೆ, ಭಾರತ ಸರಕಾರದ ಮಾನವ ಸಂಪನ್ಮೂಲ ಇಲಾಖೆಯಲ್ಲಿ ಮಂಡಿಸಲ್ಪಟ್ಟ ನ್ಯೂ ಎಜುಕೇಷನ್ ಪೋಲಿಸಿ ಕುರಿತಾದ ಡಾ. ಕಸ್ತೂರಿರಂಗನ್ ವರದಿಯನ್ನು ಪ್ರಸ್ತುತ ಹೆಚ್ಚು ಅಧ್ಯಯನ ಮಾಡಬೇಕಾಗಿದೆ, ವಿಮರ್ಶಿಸಿಬೇಕಾಗಿದೆ ಎಂದು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜಿನ ಸಂಚಾಲಕ ಕೂಡಿಗೆ ಪ್ರಕಾಶ್ ಶೆಣೈ ಹೇಳಿದ್ದಾರೆ.
ಅವರು ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲಾ ವ್ಯಾಪ್ತಿಯ ಪ್ರೈವೆಟ್ ಕಾಲೇಜ್ ಮನೇಜ್ಮೆಂಟ್ ಅಸೋಸಿಯಷನ್ ಇದರ ವತಿಯಿಂದ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜಿನಲ್ಲಿ ನ್ಯೂ ಎಜುಕೇಷನ್ ಪೋಲಿಸಿ (ಎನ್ಇಪಿ) ಇದರ ಕುರಿತಾದ ಚರ್ಚಾ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಯಾವುದೇ ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿ ಮತ್ತು ಅಧ್ಯಾಪಕರ ಮನೋಸಾಮಥ್ರ್ಯವನ್ನು ಹೆಚ್ಚಿಸುವಂತಿರಬೇಕು. ಪರೀಕ್ಷಾ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಗೆ ಕಾರಣವಾಗಿರಬೇಕು ಎಂದು ಅವರು ಹೇಳಿದರು.
ದಕ್ಷಿಣಕನ್ನಡ, ಉಡುಪಿ, ಕೊಡಗು ಜಿಲ್ಲಾ ವ್ಯಾಪ್ತಿಯ ಪ್ರೈವೆಟ್ ಕಾಲೇಜ್ ಮೇನೇಜ್ಮೆಂಟ್ ಅಸೋಸಿಯೇಷನ್ ಇದರ ಅಧ್ಯಕ್ಷ ಡಾ. ಎಚ್ ಶಾಂತರಾಮ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಎಸ್ಡಿಎಂ ಎಜುಕೇಶನ್ ಸೊಸೈಟಿ ಉಜಿರೆ ಇದರ ಕಾರ್ಯದರ್ಶಿ ಡಾ. ಯಶೋವರ್ಮ ಮಾತನಾಡಿ, ಈ ಹೊಸ ಶಿಕ್ಷಣ ನೀತಿಯ ವರದಿಯು ಕ್ರಾಂತಿಕಾರಿ ವರದಿಯಾಗಿದೆ. ಇದು ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚು ಸ್ವಾತಂತ್ರ್ಯವನ್ನು ನೀಡುತ್ತಿದೆ. ಇದು ಹೊರದೇಶದ ವಿಶ್ವವಿದ್ಯಾನಿಲಯಗಳು ಸಹ ಅನುಸರಿಸಬಹುದಾದ ವರದಿಯಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್ ಸ್ವಾಗತಿಸಿದರು. ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲಾ ವ್ಯಾಪ್ತಿಯ ಪ್ರೈವೆಟ್ ಕಾಲೇಜ್ ಮೇನೇಜ್ಮೆಂಟ್ ಅಸೋಸಿಯೇಷನ್ ಇದರ ಕಾರ್ಯದರ್ಶಿ ಪ್ರೊ. ವೈ ಭಾಸ್ಕರ ಶೆಟ್ಟಿ ವಂದಿಸಿದರು. ಅಸೋಸಿಯೇಷನ್ನ ಕೋಶಾಧಿಕಾರಿ ಸಿ.ಎ.ಎಸ್.ಎಸ್. ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಅಖಿಲಾ ಪೈ ಕಾರ್ಯಕ್ರಮ ನಿರೂಪಿಸಿದರು.







