ಕೃಷ್ಣಮಠಕ್ಕೆ ಗಾಳಿಯಿಂದ ನೀರು ತಯಾರಿಕಾ ಯಂತ್ರ ಕೊಡುಗೆ

ಉಡುಪಿ, ಜೂ.22: ಶ್ರೀಕೃಷ್ಣಮಠಕ್ಕೆ ಮುಂಬಯಿ ಮೂಲದ ಏರ್ಓ ವಾಟರ್ ಕಂಪೆನಿ ವತಿಯಿಂದ ಕೊಡುಗೆಯಾಗಿ ನೀಡಿದ ಗಾಳಿಯಿಂದ ನೀರು ಉತ್ಪಾದಿಸುವ ಯಂತ್ರವನ್ನು ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಂಪೆನಿಯ ಅಧಿಕಾರಿಗಳಾದ ಸುರೇಶ್ ಅಂಚನ್ ಮತ್ತು ಪ್ರತಾಪ್ ಕೋಟ್ಯಾನ್ ಉಪಸ್ಥಿತರಿದ್ದರು. ಯಂತ್ರವು ಪ್ರಕೃತಿಯ ಉಷ್ಣತೆಯನ್ನು ಶುದ್ಧ ಕುಡಿಯುವ ನೀರನ್ನಾಗಿ ಪರಿವರ್ತಿಸುವುದು ವಿಶೇಷವಾಗಿದೆ.
ಇದೊಂದು ಅಂತಾರಾಷ್ಟ್ರೀಯ ಪೇಟೆಂಟ್ ಪಡೆದ ನೀರು ಉತ್ಪಾದನಾ ಕಂಪೆನಿಯಾಗಿದ್ದು, ಈ ಕಂಪೆನಿ ಅಮೆರಿಕದಿಂದ 6 ಮತ್ತು ಭಾರತ ದೇಶದಿಂದ 3 ಪೇಟೆಂಟುಗಳನ್ನು ಹೊಂದಿದೆ. ದಿನಕ್ಕೆ 25 ಲೀ.ನಿಂದ 1000 ಲೀಟರುಗಳಷ್ಟು ನೀರನ್ನು ಉತ್ಪಾದಿಸುವ ಸಾಮರ್ಥ್ಯವುಳ್ಳ ಯಂತ್ರಗಳನ್ನು ಇದು ತಯಾರಿಸುತ್ತದೆ.
ಪ್ರಸ್ತುತ ಶ್ರೀಕೃಷ್ಣಮಠಕ್ಕೆ ದಾನವಾಗಿ ಕೊಟ್ಟಿರುವ ಯಂತ್ರವು ದಿನಕ್ಕೆ 25 ಲೀ.ನಷ್ಟು ಪರಿಶುದ್ಧ ನೀರನ್ನು ಉತ್ಪಾದಿಸುತ್ತದೆ. ಬೇಸಿಗೆಯಲ್ಲಿ ಉಂಟಾಗುವ ನೀರಿನ ಅಭಾವವನ್ನು ಕಂಪೆನಿ ತೊಡೆದುಹಾಕುವಂತೆ ಆಗಲಿ ಎಂದು ಪಲಿಮಾರುಶ್ರೀಗಳು ನುಡಿದರು. ಈ ಸಂದರ್ಭದಲ್ಲಿ ವಿದ್ವಾನ್ ಗಿರೀಶ ಉಪಾಧ್ಯಾಯ ಹಾಗೂ ಮಠದ ಪಿಆರ್ಓ ಶ್ರೀಶಭಟ್ ಕಡೆಕಾರ್ ಉಪಸ್ಥಿತ ರಿದ್ದರು.





