ಪಡುಬಿದ್ರಿ: ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ; ಗ್ರಾಹಕರ ಅಸಮಾಧಾನ
ಪಡುಬಿದ್ರಿ: ಇಲ್ಲಿನ ಕಾರ್ಕಳ ರಸ್ತೆಯಲ್ಲಿರುವ ಭಾರತ್ ಗ್ಯಾಸ್ ಏಜೆನ್ಸಿಯಲ್ಲಿ ಗ್ರಾಹಕರಿಗೆ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಗ್ರಾಹಕರು ಸೋಮವಾರ ಕಚೇರಿ ಎದುರು ಜಮಾಯಿಸಿದ ಘಟನೆ ಸೋಮವಾರ ನಡೆದಿದೆ.
ಇಲ್ಲಿನ ಗ್ಯಾಸ್ ಏಜೆನ್ಸಿಗೆ ಅಡುಗೆ ಅನಿಲ ಪೂರೈಕೆಯಾಗದೆ ಇರುವುದರಿಂದ ಗ್ರಾಹಕರಿಗೆ ಅಡುಗೆ ಅನಿಲ ಸರಬರಾಜು ಆಗುತಿಲ್ಲ. ಗ್ರಾಹಕರು ಸೋಮವಾರ ಕಚೇರಿಯ ಬಳಿ ನೂರಾರು ಗ್ರಾಹಕರು ಜಮಾಯಿಸಿದರು. ಆದರೆ ಕಚೇರಿ ಮುಚ್ಚಲಾಗಿತ್ತು. ಇದರಿಂದ ಏಜೆನ್ಸಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಗ್ರಾಹಕರು ಸುಮಾರು 20ದಿನಗಳಿಂದಲೂ ತಮ್ಮ ಗ್ಯಾಸ್ನ್ನು ಬುಕ್ ಮಾಡಿ ಕಾಯುತ್ತಿದ್ದೇವೆ. ಆದರೆ ಗ್ಯಾಸ್ ಪೂರೈಕೆ ಮಾಡುತ್ತಿಲ್ಲ. ಕಚೇರಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ ಎಂದು ಆರೋಪಿಸಿದರು.
ಇದೀಗ ಇಲ್ಲಿನ ಗ್ರಾಹಕರಿಗೆ ತಾತ್ಕಾಲಿಕ ನೆಲೆಯಲ್ಲಿ ಬೆಳ್ಮಣ್ನ ಭಾರತ್ ಗ್ಯಾಸ್ ಏಜೆನ್ಸಿ ಮೂಲಕವಾಗಿ ಕಳೆದ ಮೂರು ನಾಲ್ಕು ದಿನಗಳಿಂದಲೂ ಪ್ರತಿದಿನವೂ ಸುಮಾರು 150ರಷ್ಟು ಸಿಲಿಂಡರ್ಗಳ ಪೂರೈಕೆಯಾಗುತ್ತಿದೆ. ಸದ್ಯ ಅವರಿಗೆ ಗ್ಯಾಸ್ ಸಿಲಿಂಡರ್ಗಳ ಪೂರೈಕೆಯನ್ನು ತಡೆಹಿಡಿಯಲಾಗಿದೆ. ಏಜೆನ್ಸಿಗೆ ವಿಧಿಸಲಾಗಿರುವ ದಂಡನಾ ಮೊತ್ತವು ಪಾವತಿಯಾದ ಬಳಿಕ ಸಿಲಿಂಡರ್ಗಳ ಪೂರೈಕೆ ಯಥಾಸ್ಥಿತಿಗೆ ಬರಲಿದೆ. ಗ್ರಾಹಕರಿಗೆ ತೊಂದರೆಯಾಗದು ಎಂದು ಭಾರತ್ ಗ್ಯಾಸ್ನ ಮಾರುಕಟ್ಟೆ ಅಧಿಕಾರಿ ಅರುಣ್ ಮೋಹನ್ ಹೇಳಿದರು.
ಸದ್ಯ ಬೆಳ್ಮಣ್ನಿಂದ ಸಿಲಿಂಡರ್ಗಳನ್ನು ತರಿಸಿ ಗ್ರಾಹಕರಿಗೆ ಪೂರೈಸಲಾಗುತ್ತಿದೆ. ತಮಗೆ 7ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡನಾ ಮೊತ್ತದ ಪಾವತಿಯ ಬಳಿಕ ಪರಿಸ್ಥಿತಿ ತಿಳಿಯಾಗಲಿದೆ ಎಂದಿದ್ದಾರೆ ಎಂದು ಪಡುಬಿದ್ರಿಯ ಏಜೆನ್ಸಿಯ ಪ್ರತಿನಿಧಿ ಲಕ್ಷ್ಮೀನಾರಾಯಣ್ ಹೇಳಿದರು.