ಇಂದ್ರಾಳಿ ಬೆಂಕಿ ಅವಘಡ: 5.75ಕೋಟಿ ರೂ. ಅಂದಾಜು ನಷ್ಟ
11 ದ್ವಿಚಕ್ರ ವಾಹನ ಬೆಂಕಿಗೆ ಆಹುತಿ: ನಾಲ್ಕು ಅಂಗಡಿಗಳಿಗೆ ಹಾನಿ

ಉಡುಪಿ, ಜೂ.24: ಇಂದ್ರಾಳಿಯ ದ್ವಿಚಕ್ರ ವಾಹನ ಶೋರೂಂ ಇರುವ ಕಟ್ಟಡದಲ್ಲಿ ಜೂ.23ರಂದು ರಾತ್ರಿ 9:30ರ ಸುಮಾರಿಗೆ ಸಂಭವಿಸಿದ ಭಾರೀ ಬೆಂಕಿ ಅವಘಡದಿಂದ ನಾಲ್ಕು ಅಂಗಡಿಗಳಿಗೆ ಹಾನಿಯಾಗಿದ್ದು, ಒಟ್ಟು 5.75 ಕೋಟಿ ರೂ. ನಷ್ಟ ಉಂಟಾಗಿರುವ ಬಗ್ಗೆ ಅಂದಾಜಿಸಲಾಗಿದೆ.
ಜಯರಾಮ್ ಸುವರ್ಣ ಎಂಬವರ ಮೂರು ಅಂತಸ್ತಿನ ಎಆರ್ಜೆ ಆರ್ಕೆಡ್ ಕಟ್ಟಡದ ಕೆಳ, ಮೊದಲ ಮತ್ತು ಎರಡನೆ ಅಂತಸ್ತಿನಲ್ಲಿರುವ ಅವರದ್ದೆ ಮಾಲಕತ್ವದ ‘ಜೈದೇವ್ ಮೋಟೋ ರೆನ್’ ವೆಸ್ಪ ಮತ್ತು ಅಪ್ರಿಲ್ಲಾ ದ್ವಿಚಕ್ರ ವಾಹನಗಳ ಶೋರೂಂ, ಮೂರನೆ ಮಹಡಿಯಲ್ಲಿರುವ ಉಡುಪಿಯ ಸೌಜನ್ಯ ಶೆಟ್ಟಿ ಮಾಲಕತ್ವದ ವೇರ್ಹೌಸ್ ಜಿಮ್ ಸೆಂಟರ್ ಮತ್ತು ಅರವಿಂದ ಕುಮಾರ್ ಎಂಬವರ ಕೃಷ್ಣ ಇಂಜಿನಿಯರ್ಸ್ ಕಚೇರಿ, ನೆಲ ಅಂತಸ್ತಿನಲ್ಲಿರುವ ಶೇಷಾದ್ರಿ ಉಪಾಧ್ಯಾಯ ಮಾಲಕತ್ವದ ಆ್ಯಡಿಕ್ಷನ್ ಬಟ್ಟೆ ಅಂಗಡಿಗಳಿಗೆ ಈ ಬೆಂಕಿ ಅವಘಡದಿಂದ ಅಪಾರ ಹಾನಿ ಸಂಭವಿಸಿದೆ.
ಶೋರೂಂನಲ್ಲಿದ್ದ ಎರಡು ಹೊಸ ದ್ವಿಚಕ್ರ ವಾಹನಗಳು ಮತ್ತು ಸರ್ವಿಸ್ ವಿಭಾಗದಲ್ಲಿ ನಿಲ್ಲಿಸಲಾದ 9 ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು 11 ದ್ವಿಚಕ್ರ ವಾಹನಗಳು ಬೆಂಕಿಗೆ ಅಹುತಿಯಾಗಿವೆ. ಅದೇ ರೀತಿ ತಳ ಅಂತಸ್ತಿನಲ್ಲಿರುವ ಸರ್ವಿಸ್ ಸೆಂಟರ್ ಹಾಗೂ ಬಿಡಿಭಾಗಗಳ ವಿಭಾಗಗಳು ಸಂಪೂರ್ಣ ಸುಟ್ಟು ಹೋಗಿವೆ. ಸುಮಾರು 1.6ಕೋಟಿ ಮೌಲ್ಯದ ಬಿಡಿಭಾಗಗಳು ಬೆಂಕಿಯಲ್ಲಿ ಸುಟ್ಟು ಹೋಗಿವೆ.
ಅಲ್ಲದೆ ಫರ್ನಿಚರ್, ಹೆಲ್ಮೆಟ್, 11 ಕಂಪ್ಯೂಟರ್, ವಾಹನಗಳಿಗೆ ಸಂಬಂಧಿ ಸಿದ ದಾಖಲೆಗಳು, ವಿದ್ಯುತ್ ಪರಿಕರಗಳು, ಪಿಓಪಿ ಸಹಿತ ಶೋರೂಂನ ಎರಡನೆ ಮಹಡಿ ಸುಟ್ಟು ಭಸ್ಮವಾಗಿದೆ. ಶೋರೂಂನ ಮೊದಲನೆ ಮಹಡಿಯ ಗಾಜುಗಳು ಪುಡಿಯಾಗಿದ್ದರೂ ಒಳಗೆ ನಿಲ್ಲಿಸಲಾದ ಯಾವುದೇ ವಾಹನಗಳಿಗೆ ಹಾನಿಯಾಗಿಲ್ಲ. ಇಲ್ಲಿನ ಪಿಓಪಿ ಮಾತ್ರ ಸಂಪೂರ್ಣ ಕುಸಿದು ಬಿದ್ದಿರುವುದಾಗಿ ಕಂಡು ಬಂದಿದೆ.
ಎರಡು ಮೂರು ವಾಹನಗಳಿಗೆ ಸಣ್ಣ ಪುಟ್ಟ ಹಾನಿಯಾಗಿದೆ. ಬೆಂಕಿ ಹೊತ್ತಿ ಉರಿಯುತ್ತಿದ್ದಂತೆ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು, ಸ್ಥಳೀಯರು ಸುಮಾರು 25-30 ವಾಹನಗಳನ್ನು ಶೋರೂಂನಿಂದ ಹೊರಗಡೆ ತಂದು ಇಟ್ಟಿ ದ್ದಾರೆ. ಹೀಗೆ ಈ ದುರಂತದಿಂದ ಜೈದೇವ್ ಮೋಟೋ ರೆನ್ ಶೋರೂಂಗೆ ಸುಮಾರು ಐದು ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಶೋರೂಂನ ಮೇಲಿನ ಮಹಡಿಯಲ್ಲಿ ಸಾಫ್ಟ್ವೇರ್ಗೆ ಸಂಬಂಧಿಸಿದ ಇವರದ್ದೇ ಕಚೇರಿ ಇದ್ದು, ಇಲ್ಲಿನ ಎರಡು ಕಂಪ್ಯೂಟರ್, ಎರಡು ಲ್ಯಾಪ್ಟಾಪ್ ಸಹಿತ ಇಡೀ ಕಚೇರಿಯೇ ಸುಟ್ಟು ಕರಕಲಾಗಿದೆ. ಜಯರಾಮ್ ಈ ಹಿಂದೆ ಇದೇ ಕಟ್ಟಡದಲ್ಲಿ ಜೈದೇವ್ ಮೋಟಾರ್ಸ್ ಎಂಬ ಹೀರೋ ಕಂಪೆನಿಯ ದ್ವಿಚಕ್ರ ವಾಹನಗಳ ಶೋರೂಂನ್ನು ನಡೆಸುತ್ತಿದ್ದರು. ನಷ್ಟದ ಹಿನ್ನೆಲೆಯಲ್ಲಿ ಆ ಕಂಪೆನಿಯನ್ನು ಮುಚ್ಚಿ, 2018ರ ಅಕ್ಟೋಬರ್ ತಿಂಗಳಲ್ಲಿ ವೆಸ್ಪಾ ಹಾಗೂ ಅಪ್ರಿಲ್ಲಾ ಕಂಪೆನಿಯ ಹೊಸ ಶೋರೂಂನ್ನು ಆರಂಭಿಸಿದ್ದರು.
ಮೂರನೆ ಮಹಡಿಯಲ್ಲಿರುವ ವೇರ್ಹೌಸ್ ಜಿಮ್ ಸೆಂಟರ್ನ ಹವಾ ನಿಯಂತ್ರಣ, ಸಿಸಿ ಕ್ಯಾಮೆರಾ, ಜಿಮ್ ಸಾಧನಗಳು, ವಿದ್ಯುತ್ ಪರಿಕರ, ಗಾಜು, ನಾಮಫಲಕಗಳಿಗೆ ಹಾನಿಯಾಗಿದ್ದು, ಸುಮಾರು ಒಂದು 3.5ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಅದೇ ರೀತಿ ನೆಲ ಅಂತಸ್ತಿನಲ್ಲಿರುವ ಎಡಿಕ್ಷನ್ ಬಟ್ಟೆ ಅಂಗಡಿಯ ಬಟ್ಟೆಗಳು, ನಾಮಫಲಕದ ಬೋರ್ಡ್, ಹವಾನಿಯಂತ್ರಣ ಗಳಿಗೆ ಹಾನಿ ಉಂಟಾಗಿದ್ದು, ಸುಮಾರು 10 ಲಕ್ಷ ರೂ. ನಷ್ಟ ಸಂಭವಿಸಿದೆ.
ಕಟ್ಟಡದ ಮೂರನೆ ಮಹಡಿಯಲ್ಲಿರುವ ಕೃಷ್ಣ ಇಂಜಿನಿಯರ್ಸ್ ಕಚೇರಿಯ ಕಂಪ್ಯೂಟರ್, ಲ್ಯಾಪ್ಟಾಪ್ ಹಾಗೂ ಇತರ ಉಪಕರಣಗಳು ಸುಟ್ಟು ಹೋಗಿದ್ದು, ಸುಮಾರು 61,69,900ರೂ. ನಷ್ಟ ಅಂದಾಜಿಸಲಾಗಿದೆ. ಘಟನೆಗೆ ಸಂಬಂಧಿಸಿ ನಾಲ್ಕು ದೂರುಗಳನ್ನು ಮಣಿಪಾಲ ಠಾಣೆಗೆ ಸಲ್ಲಿಕೆಯಾಗಿದೆ. ಬೆಂಕಿ ಅವಘಡದ ಹಿನ್ನೆಲೆಯಲ್ಲಿ ಇಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಹಾಗೂ ಉಡುಪಿ ಶಾಸಕ ಕೆ.ರಘುಪತಿ ಭಟ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಅವಘಡ
ಕಟ್ಟಡದ ಶೋರೂಂನ ಮೇಲಿನ ಮಹಡಿಯಲ್ಲಿ ಉಂಟಾದ ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಆ ಬೆಂಕಿ ವಿದ್ಯುತ್ ವಯರ್ ಮೂಲಕ ತಳ ಅಂತಸ್ತಿನಲ್ಲಿರುವ ಸರ್ವಿಸ್ ಸೆಂಟರಿಗೆ ಹಬ್ಬಿ ಇಡೀ ಕಟ್ಟಡಕ್ಕೆ ವಿಸ್ತರಿಸಿತ್ತೆಂದು ಅಗ್ನಿಶಾಮಕದಳ ಅಧಿಕಾರಿಗಳು ನಡೆಸಿದ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ರಾತ್ರಿ 9:30ರ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ಮಾಹಿತಿ ತಿಳಿದು ಅಗ್ನಿಶಾಮಕ ದಳದ ವಾಹನಗಳು ರಾತ್ರಿ 9:50ರ ಸುಮಾರಿಗೆ ಸ್ಥಳಕ್ಕೆ ಆಗಮಿ ಸಿದವು. ಉಡುಪಿಯ ಎರಡು ಮತ್ತು ಮಲ್ಪೆ ಒಂದು ವಾಹನಗಳಲ್ಲಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಲಾಯಿತು. ಅರ್ಧ ಗಂಟೊಳಗೆ ಬೆಂಕಿ ನಿಯಂತ್ರಣಕ್ಕೆ ಬಂದ್ದು, ಒಟ್ಟು 16 ಅಗ್ನಿಶಾಮಕ ದಳದ ಸಿಬ್ಬಂದಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಜೂ.24ರ ನಸುಕಿನ ವೇಳೆ 3:30ರ ಸುಮಾರಿಗೆ ಸಂಪೂರ್ಣ ಬೆಂಕಿಯನ್ನು ನಂದಿಸಲಾಯಿತು. ಅದಕ್ಕಾಗಿ ಸುಮಾರು ಮೂರು ವಾಹನಗಳಲ್ಲಿ ಎಂಟು ಟ್ರಿಪ್ ನೀರನ್ನು ಬಳಸಲಾಗಿದೆ ಎಂದು ಜಿಲ್ಲಾ ಅಗ್ನಿ ಶಾಮಕದಳ ಅಧಿಕಾರಿ ವಸಂತ ಕುಮಾರ್ ತಿಳಿಸಿದ್ದಾರೆ.
ತಪ್ಪಿದ ಭಾರೀ ದುರಂತ
ಅಗ್ನಿ ಅವಘಡ ಸಂಭವಿಸಿದ ಕಟ್ಟಡದ ಪಕ್ಕದಲ್ಲೇ ಪೆಟ್ರೋಲ್ ಬಂಕ್ ಇದ್ದು, ಮುನ್ನೆಚ್ಚರಿಕೆ ಕ್ರಮ ವಹಿಸಿದ ಹಾಗೂ ಹೆಚ್ಚಿನ ತೈಲ ಸಂಗ್ರಹ ಇಲ್ಲದ ಕಾರಣ ಭಾರೀ ದುರಂತವೊಂದು ತಪ್ಪಿದಂತಾಗಿದೆ.
ಉಡುಪಿ- ಮಣಿಪಾಲ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಹಿನ್ನೆಲೆಯಲ್ಲಿ ಗ್ರಾಹಕರ ಸಂಖ್ಯೆ ಕಡಿಮೆಯಾಗಿರುವುದರಿಂದ ಈ ಪೆಟ್ರೋಲ್ ಬಂಕ್ನಲ್ಲಿ ಹೆಚ್ಚಿನ ತೈಲವನ್ನು ಸಂಗ್ರಹಿಸಿ ಇಟ್ಟಿರಲಿಲ್ಲ ಮತ್ತು ಪೆಟ್ರೋಲ್ ಬಂಕ್ ನವೀಕರಣ ಕಾರ್ಯ ಕೂಡ ನಡೆಯುತ್ತಿತ್ತೆನ್ನಲಾಗಿದೆ. ಅಲ್ಲದೆ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ವಿಸ್ತರಿಸಿದಂತೆ ಕ್ರಮ ತೆಗೆದುಕೊಂಡ ಪರಿಣಾಮ ಯಾವುದೇ ದುರಂತ ಸಂಭವಿಸಿಲ್ಲ.











