ಬ್ರಹ್ಮಾವರ; ಕುತ್ತಿಗೆ ಬಿಗಿದು ಅಪರಿಚಿತನ ಕೊಲೆ: ಮರಣೋತ್ತರ ಪರೀಕ್ಷೆಯಲ್ಲಿ ದೃಢ
ಬ್ರಹ್ಮಾವರ, ಜೂ.24: ವಾರಂಬಳ್ಳಿ ಗ್ರಾಮದ ಮಾಲ್ತಾರು ನಿವಾಸಿ ರಮೇಶ ಪೂಜಾರಿ ಎಂಬವರ ಮನೆಯ ಸಮೀಪದ ತೋಡಿನಲ್ಲಿ ಜೂ.23ರಂದು ಮಧ್ಯಾಹ್ನ ವೇಳೆ ಶವವಾಗಿ ಪತ್ತೆಯಾಗಿದ್ದ ಸುಮಾರು 30 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯನ್ನು ಕೊಲೆಗೈದಿರುವುದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ.
ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಮಣಿಪಾಲ ಕೆಎಂಸಿಯ ಫೊನ್ಸಿಕ್ ವಿಭಾಗದ ಮುಖ್ಯಸ್ಥ ಡಾ.ವಿಕ್ರಮ್ ಪಲಿಮಾರ್ ನೀಡಿದ ವರದಿಯಲ್ಲಿ ಮೃತ ವ್ಯಕ್ತಿಯ ಕುತ್ತಿಗೆ ಬಿಗಿದು ಉಸಿರು ಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಅದರಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಜೂ.22ರ ರಾತ್ರಿಯಿಂದ ಜೂ.23ರ ಮಧ್ಯಾಹ್ನದ ಮಧ್ಯಾವಧಿಯಲ್ಲಿ ಮೃತ ಅಪರಿಚಿತ ವ್ಯಕ್ತಿಯನ್ನು ದುಷ್ಕರ್ಮಿಗಳು ಯಾವುದೋ ಕಾರಣಕ್ಕಾಗಿ ಕೊಲೆ ಮಾಡುವ ಉದ್ದೇಶದಿಂದ ತಲೆಗೆ ತೀವ್ರ ಜಖಂಗೊಳಿಸಿ, ಬೈರಾಸ್ ಬಟ್ಟೆಯ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಮೃತ ಶರೀರವನ್ನು ನೀರಿನ ತೊಡಿಗೆ ಹಾಕಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಮೃತದೇಹವು ತೋಡಿನಲ್ಲಿ ಕವಚಿ ಬಿದ್ದ ಸ್ಥಿತಿಯಲ್ಲಿ ಕಂಡುಬಂದಿತ್ತು. ಮೃತರ ಗುರುತು ಈವರೆಗೆ ಪತ್ತೆಯಾಗಿಲ್ಲ. ಬ್ರಹ್ಮಾವರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.