ಮುಸ್ಲಿಮರ ದಫನ ಭೂಮಿಗೆ ಜಮೀನು ನೀಡಿದ ಹಿಂದುಗಳು
ಬಿಜೆಪಿ ಶಾಸಕನಿಂದ ಸೌಹಾರ್ದ ಅಭಿಯಾನ
ಫೈಝಾಬಾದ್,ಜೂ.26.: ಎರಡು ಸಮುದಾಯಗಳ ಮಧ್ಯೆ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವ ಉದ್ದೇಶದಿಂದ ಬಿಜೆಪಿ ಶಾಸಕ ಆರಂಭಿಸಿರುವ ಅಭಿಯಾನದ ಭಾಗವಾಗಿ ಉತ್ತರ ಪ್ರದೇಶದ ಫೈಝಾಬಾದ್ನಲ್ಲಿ ಮುಸ್ಲಿಮರ ದಫನ ಭೂಮಿಗೆ ಹಿಂದುಗಳು ಜಮೀನು ನೀಡಿದ್ದಾರೆ. ಫೈಝಾಬಾದ್ ಜಿಲ್ಲೆಯ ಬೆಲರಿಖಾನ್ ಗ್ರಾಮದಲ್ಲಿನ ರುದ್ರಭೂಮಿಯ ಸಮೀಪವಿದ್ದ ಜಮೀನು ಹಿಂದುಗಳು ಮತ್ತು ಮುಸ್ಲಿಮರ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿತ್ತು.
ಇದೀಗ ಈ ಜಮೀನನ್ನು ಅಲ್ಪಸಂಖ್ಯಾತ ಸಮುದಾಯಕ್ಕೆ ನೀಡಲಾಗಿದ್ದು, ಗಸೋಯಿಗಂಜ್ ಖಬರಿಸ್ತಾನ ಸಮಿತಿಗೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಫನ ಭೂಮಿಗೆ ಸಮೀಪವಿರುವ ಈ ಜಮೀನು ದಾಖಲೆಗಳ ಪ್ರಕಾರ ಹಿಂದು ಸಮುದಾಯಕ್ಕೆ ಸೇರಿದೆ.
“ಕೆಲವೊಮ್ಮೆ ಮುಸ್ಲಿಮರು ಇಲ್ಲಿ ಮೃತದೇಹಗಳನ್ನು ಹೂಳುತ್ತಿದ್ದರು ಅದಕ್ಕೆ ಕೆಲವೊಮ್ಮೆ ನಾವು ಪ್ರತಿಕ್ರಿಯಿಸುತ್ತಿದ್ದೆವು. ಆದರೆ ಮೃತದೇಹಗಳನ್ನು ಹೂಳುವುದು ಮುಂದುವರಿದಿತ್ತು” ಎಂದು ವರ್ಗಾವಣೆ ಪತ್ರಕ್ಕೆ ಇತರ ಎಂಟು ಜನರೊಂದಿಗೆ ಸಹಿಹಾಕಿದ ಸೂರ್ಯ ಕುಮಾರ್ ಜಿನ್ಕನ್ ಮಹಾರಾಜ್ ಆರೋಪಿಸಿದ್ದಾರೆ. ಗಸೋಯಿಗಂಜ್ನ ಬಿಜೆಪಿ ಶಾಸಕ ಇಂದ್ರಪ್ರತಾಪ್ ತಿವಾರಿ ಈ ಜಮೀನನ್ನು ಮುಸ್ಲಿಮರಿಗೆ ನೀಡುವಂತೆ ಹಿಂದುಗಳನ್ನು ಒಪ್ಪಿಸಿದ್ದರು ಎಂದು ಮಹಾರಾಜ್ ತಿಳಿಸಿದ್ದಾರೆ.