ಸ್ವಾತಂತ್ರ್ಯ ಹೋರಾಟಗಾರ ಮುಹಮ್ಮದ್ ಬಾಜಿ ನಿಧನ
ಬ್ರಿಟಿಷರ ವಿರುದ್ಧ ‘ಕ್ವಿಟ್ ಇಂಡಿಯಾ’ ಚಳವಳಿಯಲ್ಲಿ ಭಾಗಿಯಾಗಿದ್ದರು

ಭುವನೇಶ್ವರ, ಜೂ.27: ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಮುಹಮ್ಮದ್ ಬಾಜಿ ಅವರು ಒಡಿಶಾದ ನವರಂಗ್ಪುರದ ಸುನಾರಿ ಸಹಿಯಲ್ಲಿರುವ ತನ್ನ ನಿವಾಸದಲ್ಲಿ ಗುರುವಾರ ಕೊನೆಯುಸಿರೆಳೆದರು ಎಂದು ಅವರು ಕುಟುಂಬಸ್ಥರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಅವರಿಗೆ 103 ವರ್ಷ ವಯಸ್ಸಾಗಿತ್ತು. 1917ರ ಜನವರಿ 20ರಂದು ಜನಿಸಿದ್ದ ಬಾಜಿ ಅವರು ಅವಿವಾಹಿತರಾಗಿದ್ದರು. ಬುಡಕಟ್ಟು ಜನರ ನಾಗರಿಕ ಹಕ್ಕುಗಳ ಹೋರಾಟಗಾರ ಲಕ್ಷ್ಮಣ ನಾಯಕ್ ಅವರ ಆಪ್ತರಾಗಿದ್ದ ಬಾಜಿ ಅವರು 1942ರಲ್ಲಿ ಮಲ್ಕಾನ್ಗಿರಿ ಜಿಲ್ಲೆಯಲ್ಲಿ ಮಥಿಲಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸುವ ವೇಳೆ ಹತ್ಯೆಗೀಡಾದ 29 ಬುಡಕಟ್ಟು ಜನರ ಸಾವನ್ನು ಖಂಡಿಸಿ ನಡೆದ ಚಳವಳಿಯ ಸಂದರ್ಭ ನಡೆದ ಪೊಲೀಸ್ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದರು.
1936ರಲ್ಲಿ ಒಡಿಶಾ ಭಾಷೆಯ ಆಧಾರದಲ್ಲಿ ಪ್ರತ್ಯೇಕ ಪ್ರಾಂತವಾಗಿ ರೂಪುಗೊಂಡ ಅವಧಿಯಲ್ಲಿ ಬಾಜಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು. ‘ಕ್ವಿಟ್ ಇಂಡಿಯಾ’ ಚಳವಳಿಯಲ್ಲೂ ಭಾಗಿಯಾಗಿದ್ದ ಅವರನ್ನು 1942ರ ಆಗಸ್ಟ್ 19ರಂದು ಬಂಧಿಸಲಾಗಿತ್ತು. ಐದು ವರ್ಷಗಳನ್ನು ಜೈಲಿನಲ್ಲಿ ಕಳೆದ ನಂತರ ಬಾಜಿ ಅವರನ್ನು 1947ರ ಜೂನ್ 25ರಂದು ಬಿಡುಗಡೆ ಮಾಡಲಾಯಿತು.
ಸ್ವಾತಂತ್ರ್ಯದ ನಂತರ ಬಾಜಿ ಅವರು ಸರ್ವೋದಯ ಚಳುವಳಿಯಲ್ಲಿ ಸಕ್ರಿಯರಾಗಿದ್ದರು. ಅವರು ಉತ್ಕಲ ಗಾಂಧಿ ಸ್ಮಾರಕ ನಿಧಿಯ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ. ಬಾಬರಿ ಮಸೀದಿ ಧ್ವಂಸ ಮತ್ತು ಕಂಧಮಲ್ನಲ್ಲಿ 2008ರಲ್ಲಿ ಕೋಮು ದಂಗೆಗಳು ನಡೆದ ಸಂದರ್ಭದಲ್ಲಿ ಶಾಂತಿ ಮರುಸ್ಥಾಪನೆಗಾಗಿ ಬಾಜಿ ಅವರು ನವರಂಗ್ಪುರದಲ್ಲಿ ಪಾದಯಾತ್ರೆ ನಡೆಸಿದ್ದರು. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಮುಹಮ್ಮದ್ ಬಾಜಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.