ಕೇವಲ ಅನಕ್ಷರಸ್ಥ ಕುಟುಂಬಗಳಲ್ಲಿ ಹೆಣ್ಮಕ್ಕಳಿಗೆ ಸುರಕ್ಷತೆಯಿಲ್ಲ ಎನ್ನುವುದು ಸುಳ್ಳು: ಸ್ಮೃತಿ ಇರಾನಿ

ಹೊಸದಿಲ್ಲಿ,ಜೂ.27: ಕೇವಲ ಅನಕ್ಷರಸ್ಥ ಕುಟುಂಬಗಳಲ್ಲಿ ಹೆಣ್ಮಕ್ಕಳಿಗೆ ಸುರಕ್ಷತೆಯಿಲ್ಲ ಎನ್ನುವುದು ಸುಳ್ಳು. ಸುಶಿಕ್ಷಿತ ಪರಿವಾರಗಳು ನೆಲೆಸುವಲ್ಲಿಯೂ ಹೆಣ್ಮಕ್ಕಳು ತಾರತಮ್ಯಕ್ಕೆ ಒಳಗಾಗುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.
ಪ್ರಶ್ನಾವಳಿ ಅವಧಿಯಲ್ಲಿ ಪ್ರಶ್ನೆಗಳಿಗೆ ಉತ್ತರಿಸುವ ವೇಳೆ ಈ ಕುರಿತು ಮಾತನಾಡಿದ ಇರಾನಿ, ತನ್ನ ಸರಕಾರ ಈ ನಿಟ್ಟಿನಲ್ಲಿ ಶ್ರಮಿಸುತ್ತಿದೆ ಮತ್ತು ‘ಬೇಟಿ ಪಡಾವೊ, ಬೇಟಿ ಬಚಾವೊ’ ಆಂದೋಲನ ಇಂತಹ ವಿಷಯಗಳಿಗೆ ಪರಿಹಾರ ಕಂಡುಕೊಳ್ಳುವ ಇರಾದೆಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನಡೆಸಿರುವ ಅವಿರತ ಪ್ರಯತ್ನದಿಂದ 25 ರಾಜ್ಯಗಳಲ್ಲಿ ಹೆಣ್ಮಕ್ಕಳ ಸುರಕ್ಷತೆಯಲ್ಲಿ ಏರಿಕೆಯಾಗಿರುವುದು ಕಂಡುಬಂದಿದೆ. ಆದರೆ ಅತ್ಯಂತ ಕೈಗಾರೀಕರಣಗೊಂಡಿರುವ, ಸುಶಿಕ್ಷಿತ ಪ್ರದೇಶಗಳಲ್ಲಿ ಕೆಲವು ಸಮಯಗಳಲ್ಲಿ ಹೆಣ್ಮಕ್ಕಳ ಸುರಕ್ಷತೆಯಲ್ಲಿ ಕೊರತೆ ಕಂಡುಬಂದಿದೆ ಎಂದು ಇರಾನಿ ಒಪ್ಪಿಕೊಂಡಿದ್ದಾರೆ. ಅಭಿವೃದ್ಧಿ ಹೊಂದಿದ ಕೆಲವು ರಾಜ್ಯಗಳಲ್ಲಿ ಮಕ್ಕಳ ಲಿಂಗಾನುಪಾತದಲ್ಲಿ ಇಳಿಕೆಯಾಗಿದೆ ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ತಿಳಿಸಿದ್ದ ಹಿನ್ನೆಲೆಯಲ್ಲಿ ಇರಾನಿ ಈ ಸ್ಪಷ್ಟನೆಯನ್ನು ನೀಡಿದ್ದಾರೆ.