ಅಂತರಾಷ್ಟ್ರೀಯ ಜೀನಿಯಸ್ ಒಲಿಂಪಿಯಾಡ್ನಲ್ಲಿ ಆಳ್ವಾಸ್ ವಿದ್ಯಾರ್ಥಿಯ ಸಾಧನೆ

ಮೂಡುಬಿದಿರೆ: ನ್ಯೂಯಾರ್ಕನ ಓಸ್ವೇಗೋ ವಿಶ್ವವಿದ್ಯಾಲಯದಲ್ಲಿ ಜೂನ್ 19 ರಂದು ನಡೆದ ಅಂತರಾಷ್ಟ್ರೀಯ ಮಟ್ಟದ ಜೀನಿಯಸ್ ಒಲಿಂಪಿಯಾಡ್ನಲ್ಲಿ ಆಳ್ವಾಸ್ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆಯ 10 ನೇ ತರಗತಿ ವಿದ್ಯಾರ್ಥಿ ಅಮೋಘ ನಾರಾಯಣ ಸೆಕೆಂಡ್ ಗ್ರ್ಯಾಂಡ್ ಪ್ರಶಸ್ತಿಯೊಂದಿಗೆ ರಜತ ಪದಕ ವನ್ನು ಗಳಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ.
ಈ ಸ್ಪರ್ಧೆಗೆ 79 ದೇಶಗಳಿಂದ 1269 ಸ್ಪರ್ಧಾಳುಗಳು ಭಾಗವಹಿಸಿದ್ದು, ಇವರ ಅನ್ವೇಷಣೆಯಾದ ‘’ಎವಾಲ್ಯೂವೆಷನ್ ಆಫ್ ನಾವೆಲ್ ಇಕೋ ಫ್ರೆಂಡ್ಲಿ ವೀಡಿಸೈಡ್ ಫ್ರಮ್ ಕೋಕಮ್ ಫ್ರೂಟ್ ಎಕ್ಸ್ಟ್ರಾಕ್ಟ್ ಸೋಪ್ ನಟ್” ದ್ವಿತೀಯ ಸ್ಥಾನವನ್ನು ಗಳಿಸುವುದರ ಜೊತೆಗೆ ಬೆಳ್ಳಿ ಪದಕ, ಪ್ರಶಸ್ತಿ ಪತ್ರ, ಟ್ಯಾಬ್ಲೆಟ್ನ್ನು ತನ್ನದಾಗಿಸಿಕೊಂಡಿದೆ.
ಇವರು ಕಳೆದ 2017 ರಲ್ಲಿ ನವದೆಹಲಿಯಲ್ಲಿ ನಡೆದ ‘ಐ.ಆರ್.ಐ.ಎಸ್- ನ್ಯಾಷನಲ್ ಫೇರ್’ ಭಾಗವಹಿಸಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದರು. 2018ರ ಪಿಟ್ಸ್ಬರ್ಗ್ನಲ್ಲಿ ನಡೆದ ಸ್ಪರ್ಧೆಯಲ್ಲಿ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಹಾಗೂ ಗಣಿತ ಕ್ಷೇತ್ರದ ಮೇರು ಸಾಧನೆಗೆ ‘’ಬ್ರಾಡ್ಕೋಮ್ ಮಾಸ್ಟರ್ಸ್ ಅಂತಾರಾಷ್ಟ್ರೀಯ ಪ್ರಶಸ್ತಿ’ ಗಳಿಸಿದ್ದರು. 2018ರ ಐರಿಸ್ ನ್ಯಾಷನಲ್ ಫೇರ್ ನಲ್ಲಿ ‘ಎ.ಎಸ್.ಎಮ್- ಮಟೇರಿಯಲ್ ಸೈನ್ಸ್ ಅವಾರ್ಡ್ ಹಾಗೂ ರಿಕೋ ಸಸ್ಟೈನೇಬಲ್ ಡೆವಲಪ್ಮೆಂಟ್’ ಪ್ರಶಸ್ತಿಗೂ ಭಾಜನರಾಗಿದ್ದರು. ಇದೇ ವರ್ಷದ ಎಪ್ರಿಲ್ ತಿಂಗಳಲ್ಲಿ ಇಸ್ರೋಗೆ ಆಯ್ಕೆಯಾಗಿ ‘ಇಸ್ರೋ ಯುವಿಕ’ ಯುವ ವಿಜ್ಞಾನಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇವರು ಮಂಡಿಸಿದ ಯೋಜನೆಯ ವಿಷಯವು ಪ್ರೌಢಶಾಲಾ ವಿದ್ಯಾರ್ಥಿಗಳಿಗಿರುವ ‘’ಹೈಸ್ಕೂಲ್ ರಿಸರ್ಚ ಆ್ಯಂಡ್ ಸ್ಟೇಟ್ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್’’ ಅಂತಾರಾಷ್ಟ್ರೀಯ ಪತ್ರಿಕೆಯಲ್ಲಿ ಪ್ರಕಟವಾಗಲು ಆಯ್ಕೆಯಾಗಿದೆ. ಇದೇ ಸಂಸ್ಥೆ ಇವರಿಗೆ ಅಮೇರಿಕಾದಲ್ಲಿ ಉಚಿತ ಶಿಕ್ಷಣ ಹಾಗೂ ವಿದ್ಯಾರ್ಥಿವೇತನವನ್ನು ಘೋಷಣೆ ಮಾಡಿದೆ.
ಅಂತರಾಷ್ಟ್ರೀಯ ಮಟ್ಟದ ಜೀನಿಯಸ್ ಒಲಿಂಪಿಯಾಡ್ನಲ್ಲಿ ಸಾಧನೆ ಮಾಡಿರುವ ಅಮೋಘ ನಾರಾಯಣಗೆ ಗುರುವಾರ ಶಾಲೆಯವತಿಯಿಂದ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪೂರ್ಣ ಕುಂಭ ಸ್ವಾಗತದೊಂದಿಗೆ, ಬ್ಯಾಂಡ್ ಸೆಟ್ ಹಾಗೂ ಎನ್ಸಿಸಿಯ ಭವ್ಯ ಮೆರವಣಿಗೆಯಲ್ಲಿ ಫೌಡಶಾಲೆಯ ಆವರಣದಲ್ಲಿ ಕರೆದೊಯ್ಯಾಲಾಯಿತು. ನಂತರ ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ, ವಿದ್ಯಾರ್ಥಿಯ ಪೋಷಕರು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಪಾರಂಪರಿಕ ಮಾದರಿಯಲ್ಲಿ ಸನ್ಮಾನಿಸಲಾಯಿತು.
ವಿದ್ಯಾರ್ಥಿಯ ಸಾಧನೆಯನ್ನು ಶ್ಲಾಘಿಸಿದ ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ, ‘’ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ಚೈತನ್ಯದ ಜೊತೆಗೆ ವೈಜ್ಞಾನಿಕತೆ ಮನೋಭಾವವನ್ನು ಬೆಳಸಿದರೆ ಎಂಥಹ ಸಾಧನೆಯನ್ನು ಮಾಡಬಲ್ಲರು ಎಂಬುದಕ್ಕೆ ಅಮೋಘ ನಾರಾಯಣ ಸಾಕ್ಷಿ. ಇವರ ಸಾಧನೆ ಎಲ್ಲರಿಗೂ ಮಾದರಿ. ಇವರು ಮುಂದಿನ ಜೀವನದಲ್ಲೂ ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂದರು’’.
ಇವರು ಪುತ್ತೂರಿನ ಖ್ಯಾತ ವೈದ್ಯ ದಂಪತಿಗಳಾದ ಡಾ ರಾಜರಾಮ್ ಚಂದ್ರ ಹಾಗೂ ಡಾ ಸುಧಾ ಸುಬ್ರಾಯ್ ಹೆಗ್ಡೆಯವರ ಸುಪುತ್ರ.







