ಈ ಕಾರ್ಡ್ ತೋರಿಸಿದರೆ ದೇಶದ ಯಾವ ಭಾಗದಲ್ಲೂ ರೇಶನ್ ಪಡೆಯಬಹುದು!
ಸರಕಾರದ ಹೊಸ ಯೋಜನೆ ಹೀಗಿರಲಿದೆ…

ಹೊಸದಿಲ್ಲಿ, ಜೂ.28: ಬಡವರು ತಮ್ಮ ರೇಶನ್ ಕಾರ್ಡ್ ಮೂಲಕ ದೇಶದ ಯಾವುದೇ ಭಾಗದಲ್ಲೂ ರೇಶನ್ ಪಡೆಯಲು ಸಾಧ್ಯವಾಗುವಂತೆ 'ಒಂದು ದೇಶ, ಒಂದು ಕಾರ್ಡ್' ಯೋಜನೆಯನ್ನು ಜಾರಿಗೆ ತರಲು ಸರಕಾರ ಚಿಂತನೆ ನಡೆಸುತ್ತಿದೆ ಎಂದು ಆಹಾರ ಸಚಿವ ರಾಮವಿಲಾಸ್ ಪಾಸ್ವಾನ್ ರಾಜ್ಯಸಭೆಯಲ್ಲಿ ಶುಕ್ರವಾರ ತಿಳಿಸಿದ್ದಾರೆ.
ಸದ್ಯ ರೇಶನ್ ಕಾರ್ಡ್ ಮೂಲಕ ಬಡಜನರಿಗೆ ಗೋಧಿ ಕೆ.ಜಿಗೆ 2ರೂ. ಮತ್ತು ಅಕ್ಕಿ ಕೆ.ಜಿಗೆ 3ರೂ.ನಂತೆ ನೀಡಲಾಗುತ್ತಿದೆ ಮತ್ತು ಸರಕಾರ ಆಹಾರದ ಮೇಲೆ ನೀಡುವ ಸಬ್ಸಿಡಿ 1,45,000 ಕೋಟಿ ರೂ. ತಲುಪಿದೆ ಎಂದು ಅವರು ತಿಳಿಸಿದ್ದಾರೆ. ಆಹಾರ ಧಾನ್ಯಗಳ ಮೇಲಿನ ವೆಚ್ಚ ಹೆಚ್ಚಾಗುತ್ತಿದ್ದರೂ ರೇಶನ್ನಲ್ಲಿ ನೀಡುವ ಆಹಾರ ಧಾನ್ಯಗಳ ಮೊತ್ತವನ್ನು ಏರಿಕೆ ಮಾಡಿಲ್ಲ. ಈ ಯೋಜನೆಯಡಿ ಆಹಾರ ಪದಾರ್ಥಗಳನ್ನು ರಾಜ್ಯ ಸರಕಾರದೊಂದಿಗೆ ಸಮನ್ವಯದ ಮೂಲಕ ವಿತರಿಸುವುದರಿಂದ ಇಲ್ಲಿಯವರೆಗೆ ಸೋರಿಕೆಯೂ ಕಂಡುಬಂದಿಲ್ಲ ಎಂದು ಪಾಸ್ವಾನ್ ತಿಳಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಈ ಯೋಜನೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಮತ್ತು ಅಕ್ಕಿ, ಗೋಧಿ ಹಾಗೂ ಇತರ ಆಹಾರ ಪದಾರ್ಥಗಳನ್ನು ಬಡಜನರಿಗೆ ಸಬ್ಸಿಡಿ ದರದಲ್ಲಿ ಒದಗಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಒಂದು ದೇಶ, ಒಂದು ಕಾರ್ಡ್ ಯೋಜನೆಯಡಿ ಓರ್ವ ವ್ಯಕ್ತಿ ದೇಶದ ಯಾವುದೇ ಮೂಲೆಗೆ ಪ್ರಯಾಣಿಸಿದರೂ ಆತನ ಬಳಿ ರೇಶನ್ ಕಾರ್ಡ್ ಇದ್ದರೆ ಆತ ಅಲ್ಲಿಯೂ ರೇಶನ್ ಪಡೆಯಬಹುದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.