ಬಗಂಬಿಲ: ಯುವತಿಗೆ ಚೂರಿಯಿಂದ ಇರಿದು ಆತ್ಮಹತ್ಯೆಗೆ ಯತ್ನಿಸಿದ ಯುವಕ

ಉಳ್ಳಾಲ ಠಾಣಾ ವ್ಯಾಪ್ತಿಯ ಬಗಂಬಿಲ ಎಂಬಲ್ಲಿ ಕಾಲೇಜಿನಿಂದ ಮನೆಗೆ ಹಿಂತಿರುಗುತ್ತಿದ್ದ ವಿದ್ಯಾರ್ಥಿ ನಿಗೆ ಬೈಕಿನಲ್ಲಿ ಬಂದ ಯುವಕನೋರ್ವ ಎದೆ, ಕಾಲು, ಹೊಟ್ಟೆಯ ಭಾಗಕ್ಕೆ ಚೂರಿಯಿಂದ ಇರಿದು ತಾನೂ ಕುತ್ತಿಗೆ ಭಾಗಕ್ಕೆ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶುಕ್ರವಾರ ಸಂಭವಿಸಿದೆ.
ಬಗಂಬಿಲ ನಿವಾಸಿ ದೀಕ್ಷಾ ಎಂಬಾಕೆಯೇ ಇರಿತ್ತಕ್ಕೆ ಒಳಗಾದ ಯುವತಿಯಾಗಿದ್ದಾಳೆ. ಈಕೆ ಖಾಸಗಿ ಕಾಲೇಜೊಂದರ ಎಂಬಿಎ ಪ್ರಥಮ ವರ್ಷದ ವಿದ್ಯಾರ್ಥಿನಿಯೂ ಆಗಿದ್ದಾಳೆ.
ಚೂರಿ ಇರಿದ ಯುವಕನನ್ನು ಮಂಗಳೂರು ಶಕ್ತಿನಗರ ನಿವಾಸಿ ಸುಶಾಂತ್ ಎಂದು ಗುರುತಿಸಲಾಗಿದೆ.
ಯುವತಿಗೆ ಇರಿದು ತಾನೂ ಇರಿದುಕೊಂಡ
ಕಾಲೇಜಿನಿಂದ ಬಂದ ದೀಕ್ಷಾ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಬೈಕಿನಲ್ಲಿ ಬಂದ ಸುಶಾಂತ್ ಕಾಲು, ಎದೆ, ಹೊಟ್ಟೆಯ ಭಾಗಕ್ಕೆ ಚೂರಿಯಿಂದ ಇರಿದಿದ್ದಾನೆ.
ದೀಕ್ಷಾ ಬೊಬ್ಬಿಡುತ್ತಿದ್ದಂತೆ ಸ್ಥಳೀಯರು ಜಮಾಯಿಸಿದ್ದಾರೆ. ಈ ಸಂದರ್ಭ ಸುಶಾಂತ್ ತಾನೂ ಕುತ್ತಿಗೆ ಭಾಗಕ್ಕೆ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಸ್ಥಳೀಯರು ಆಂಬ್ಯುಲೆನ್ಸ್ ಮೂಲಕ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಥಳಕ್ಕೆ ಎಸಿಪಿ ರಾಮರಾವ್, ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ, ಕೊಣಾಜೆ ಠಾಣಾಧಿಕಾರಿ ರವೀಶ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿನಿ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.
ಘಟನೆಗೆ ಏಕಮುಖ ಪ್ರೇಮ ಪ್ರಕರಣ ಕಾರಣ ಎನ್ನಲಾಗುತ್ತಿದ್ದು, ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.







