ಚುನಾವಣೆ ವೈಫಲ್ಯದ ಹೊಣೆ ಹೊತ್ತು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ: ರಾಹುಲ್ ಗಾಂಧಿ

ಹೊಸದಿಲ್ಲಿ, ಜೂ. 28: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ತನ್ನ ನಿರ್ಧಾರಕ್ಕೆ ಬದ್ಧರಾಗಿರುವ ರಾಹುಲ್ ಗಾಂಧಿ, ಲೋಕಸಭೆ ಚುನಾವಣೆಯಲ್ಲಿ ಪಕ್ಷದ ವೈಫಲ್ಯದ ಹೊಣೆ ಹೊತ್ತು ತಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವಂತೆ ಹಾಗೂ ಸಲ್ಲಿಸಿದ ರಾಜೀನಾಮೆ ಹಿಂಪಡೆಯುವಂತೆ ಆಗ್ರಹಿಸಿರುವ ಹರ್ಯಾಣ ರಾಜ್ಯ ಸಮನ್ವಯ ಸಮಿತಿಯ ನಾಯಕರ ಸಭೆಯ ಸಂದರ್ಭ ಅವರು ಈ ಹೇಳಿಕೆ ನೀಡಿದರು. ''ಲೋಕಸಭಾ ಚುನಾವಣೆಯಲ್ಲಿ ಪಕ್ಷ ಸೋತಿರುವುದರ ಹೊಣೆ ಹೊತ್ತು ನಾನು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಇತರರು ಕೂಡ ರಾಜೀನಾಮೆ ನೀಡಿ ಎಂದು ನಾನು ಹೇಳಲು ಸಾಧ್ಯವಿಲ್ಲ. ಅವರು ಹೊಣೆ ಹೊತ್ತುಕೊಳ್ಳಲು ಬಯಸಿದರೆ, ಅದು ಅವರಿಗೆ ಬಿಟ್ಟ ವಿಚಾರ'' ಎಂದು ಅವರು ಹೇಳಿದರು.
ಹರ್ಯಾಣದಲ್ಲಿ 10 ಲೋಕಸಭಾ ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಕೂಡ ಕಾಂಗ್ರೆಸ್ ಪಡೆದಿಲ್ಲ. ಅಶೋಕ್ ತನ್ವರ್ ಕಾಂಗ್ರೆಸ್ ವರಿಷ್ಠರಾಗಿ ಮುಂದುವರಿಯಲಿದ್ದಾರೆ. ಅಧಿಕಾರವಧಿ ಮುಗಿದ ಹೊರತಾಗಿಯೂ ಅವರು ರಾಜೀನಾಮೆ ನೀಡಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಕಾರ್ಯತಂತ್ರದ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, ಈ ಬಗ್ಗೆ ನಾಯಕರ ನಡುವೆ ಚರ್ಚೆ ನಡೆಯುತ್ತಿದೆ ಎಂದರು.
ನಾವು ರಾಹುಲ್ ಗಾಂಧಿ ಅವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದೇವೆ ಹಾಗೂ ರಾಜ್ಯ ನಾಯಕತ್ವದ ಬಗ್ಗೆ ಪಕ್ಷ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಮುಂದಿನ ವರ್ಷ ಹರ್ಯಾಣದಲ್ಲಿ ವಿಧಾನ ಸಭೆ ಚುನಾವಣೆ ನಡೆಯಲಿದೆ ಎಂದು ಪಕ್ಷದ ರಾಜ್ಯ ನಾಯಕರು ತಿಳಿಸಿದ್ದಾರೆ.