ಮುಂಬಯಿಯಲ್ಲಿ ಭಾರೀ ಮಳೆ: ಮೂವರು ಬಲಿ
ಜನಜೀವನ ಅಸ್ತವ್ಯಸ್ತ

ಮುಂಬೈ, ಜೂ.28: ಮುಂಬೈಯಲ್ಲಿ ಶುಕ್ರವಾರ ಬೆಳಗ್ಗಿನಿಂದ ಭಾರೀ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಈ ಮಧ್ಯೆ ರಾಜ್ಯದ ವಿವಿಧೆಡೆ ಸಿಡಿಲು ಮತ್ತು ವಿದ್ಯುತ್ ಆಘಾತದಿಂದ ಯುವತಿ ಸಹಿತ ಮೂವರು ಮೃತಪಟ್ಟಿದ್ದಾರೆ.
ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯಲ್ಲಿ ಸತತ ನಾಲ್ಕು ದಿನದಿಂದ ಮಳೆಯಾಗುತ್ತಿದ್ದು ಹಲವೆಡೆ ತಗ್ಗು ಪ್ರದೇಶಗಳಲ್ಲಿ ನೆರೆ ನೀರು ನಿಂತಿದೆ. ಜಿಲ್ಲೆಯ ಪಿಂಪಲಸ್ ಗ್ರಾಮದ 18 ವರ್ಷದ ಯುವತಿ ರೂಪಾಲಿ ಭೋಯಿ ಗುರುವಾರ ಬೆಳಿಗ್ಗೆ ಸಿಡಿಲು ಬಡಿದು ಮೃತಪಟ್ಟಿದ್ದಾಳೆ. ಮತ್ತೊಂದು ಘಟನೆಯಲ್ಲಿ ಮುಂಬೈಯ ನಾಕಾ ಪ್ರದೇಶದಲ್ಲಿರುವ ಪಾನ್ ಅಂಗಡಿಯ ಬಳಿಯಲ್ಲಿ 52 ವರ್ಷದ ಪೂವಪ್ಪ ಕಲಾಲ್ ಎಂಬ ವ್ಯಕ್ತಿ ಗುರುವಾರ ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಅಂಧೇರಿಯಲ್ಲಿ ವಿದ್ಯುತ್ ಆಘಾತದಿಂದ 60 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ದಾದರ್ (ಪೂರ್ವ)ದಲ್ಲಿ ಭಾರೀ ಮಳೆಗೆ ಗೋಡೆಯೊಂದು ಕುಸಿದುಬಿದ್ದು ಮೂವರು ಗಾಯಗೊಂಡಿದ್ದಾರೆ. ಇವರಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದು ಗಾಯಾಳುಗಳನ್ನು ಸಮೀಪದ ಕೆಇಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ರಸ್ತೆಯಲ್ಲಿ ನೀರು ನಿಂತ ಕಾರಣ ಹಲವು ಮುಂಬೈಯಲ್ಲಿ ಹಲವು ಸರಕಾರಿ ಬಸ್ಸುಗಳ ಮಾರ್ಗವನ್ನು ಬದಲಿಸಿದ ಕಾರಣ ಪ್ರಯಾಣಿಕರು ಅತಂತ್ರ ಸ್ಥಿತಿ ಎದುರಿಸುವಂತಾಯಿತು. ರಸ್ತೆಯಲ್ಲಿ ನೀರು ನಿಂತ ಕಾರಣ ವಾಹನ ಚಲಿಸಲು ಅಡ್ಡಿಯಾಗಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.
ಸಾಕಿನಾಕ, ಕುರ್ಲ, ಘಾಟ್ಕೊಪರ್ ಮುಂತಾದ ಪ್ರದೇಶಗಳಲ್ಲೂ ರಸ್ತೆ ಜಲಾವೃತಗೊಂಡು ವಾಹನ ಸಂಚಾರಕ್ಕೆ ತೊಡಕಾಗಿದೆ. ರೈಲ್ವೇ ಹಳಿಗಳಿಗೂ ನೀರು ನುಗ್ಗಿರುವ ಕಾರಣ ಕೆಲವು ರೈಲುಗಳ ಸಂಚಾರ ವಿಳಂವಾಗಿದೆ. ವಿಮಾನಗಳ ಹಾರಾಟಕ್ಕೂ ತೊಡಕಾಗಿದೆ. ಶನಿವಾರವೂ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಬಿಬಿಎಂಪಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಲಾ ಕಟ್ಟಡ ತೆರವು
ಈ ಮಧ್ಯೆ, ಭಾರೀ ಮಳೆಯಿಂದಾಗಿ ಥಾಣೆಯಲ್ಲಿ ನಾಲ್ಕು ಅಂತಸ್ತಿನ ಶಾಲಾ ಕಟ್ಟಡವೊಂದರ ಸಿಮೆಂಟ್ ಗಾರೆ ಉದುರತೊಡಗಿದ್ದು ತಕ್ಷಣ ನಗರಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಶಾಲಾ ಕಟ್ಟಡವನ್ನು ತೆರವುಗೊಳಿಸಿದ್ದಾರೆ. ಕಿಸ್ಮತ್ ಕಾಲನಿಯ ಮುಂಬಾ ಟೌನ್ಶಿಪ್ ಪ್ರದೇಶದಲ್ಲಿರುವ ಈ ಕಟ್ಟಡ 25 ವರ್ಷ ಹಳೆಯದಾಗಿದ್ದು ಅಪಾಯಕಾರಿ ಕಟ್ಟಡಗಳ ಪಟ್ಟಿಯಲ್ಲಿ ಸಿ-ಬಿ ವರ್ಗದಲ್ಲಿದೆ. ಇದನ್ನು ದುರಸ್ತಿ ನಡೆಸುವ ಅಗತ್ಯವಿದೆ ಎಂದು ಥಾಣೆ ಪ್ರದೇಶದ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥ ಸಂತೋಷ್ ಕದಮ್ ಹೇಳಿದ್ದಾರೆ.