ಭಾರತ ತೀವ್ರ ಮಳೆ, ಬಿಸಿಗಾಳಿಯನ್ನು ಎದುರಿಸುತ್ತಿದೆ: ಕೇಂದ್ರ

ಹೊಸದಿಲ್ಲಿ, ಜೂ.29: ಭಾರತವು ತೀವ್ರ ಬಿಸಿಗಾಳಿ ಮತ್ತು ಅತೀಹೆಚ್ಚು ಮಳೆ ಜೊತೆಗೆ ಸಮುದ್ರ ಮಟ್ಟದ ಏರಿಕೆಯ ಸಮಸ್ಯೆಯನ್ನು ಅನುಭವಿಸುತ್ತಿದೆ ಎಂದು ಕೇಂದ್ರ ಸರಕಾರ ಲೋಕಸಭೆಯಲ್ಲಿ ತಿಳಿಸಿದೆ.
ಜಾಗತಿಕ ತಾಪಮಾನ ಏರಿಕೆ ಕುರಿತು ಬಿಜೆಪಿಯ ಶಿವಕುಮಾರ್ ಉದಾಸಿ ಮತ್ತು ಕನಕ್ಮಲ್ ಕಟಾರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯಕ ಸಚಿವ ಅಶ್ವಿನಿ ಚೌಬೆ ಈ ಉತ್ತರವನ್ನು ನೀಡಿದ್ದಾರೆ. ಈ ಹವಾಮಾನ ವೈಪರಿತ್ಯಗಳ ಮತ್ತು ಅವುಗಳ ಕೆಟ್ಟ ಪರಿಣಾಮಗಳ ಬಗ್ಗೆ ಹಲವು ವೈಜ್ಞಾನಿಕ ಅಧ್ಯಯನಗಳನ್ನು ನಡೆಸಲಾಗಿದೆ. ತೀವ್ರ ಮಳೆ ಮತ್ತು ಬಿಸಿಗಾಳಿಯಂತಹ ತಾಪಮಾನ ಏರಿಕೆ ವಿದ್ಯಮಾನಗಳು ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆ ಜೊತೆ ಸಂಬಂಧವನ್ನು ಹೊಂದಿದೆ ಎನ್ನುವುದು ಇತ್ತೀಚಿನ ಅಧ್ಯಯನಗಳಲ್ಲಿ ತಿಳಿದುಬಂದಿದೆ ಎಂದು ಸಚಿವರು ತಿಳಿಸಿದ್ದಾರೆ.
ಭಾರತದಲ್ಲಿ ತೀವ್ರ ಮಳೆಯ ಆವರ್ತನೆ ಮತ್ತು ಪ್ರಮಾಣದಲ್ಲಿ ಏರಿಕೆಯಾಗಿರುವ ವಿದ್ಯಾಮಾನ ಜಾಗತಿ ತಾಪಮಾನ ಏರಿಕೆಯ ಪರಿಣಾಮವಾಗಿದೆ ಎಂದು ಅಧ್ಯಯನಗಳು ತಿಳಿಸಿವೆ. ಸಮುದ್ರ ಮಟ್ಟದಲ್ಲಿ ಏರಿಕೆ ಮತ್ತು ವಾತಾವರಣದ ತಾಪಮಾನದಲ್ಲಿ ಏರಿಕೆ ಜಾಗತಿಕ ತಾಪಮಾನ ಏರಿಕೆಯ ವಿವಿಧ ಪರಿಣಾಮಗಳಲ್ಲಿ ಸೇರಿದೆ. ಸಚಿವಾಲಯ ನಡೆಸಿರುವ ಅಧ್ಯಯನದ ಪ್ರಕಾರ, ಸಮುದ್ರ ಮಟ್ಟವು ಭಾರತದ ಕರಾವಳಿಯಲ್ಲಿ ವಿವಿಧ ದರಗಳಲ್ಲಿ ಬದಲಾಗುತ್ತಿದೆ ಎಂದು ಚೌಬೆ ತಿಳಿಸಿದ್ದಾರೆ.