‘ದ ವೈರ್’ನ ಶೆರ್ವಾನಿ, ವಜೀಹ್ಗೆ ಪ್ರತಿಷ್ಠಿತ ‘ರೆಡ್ ಇಂಕ್’ ಪ್ರಶಸ್ತಿ

ಹೊಸದಿಲ್ಲಿ, ಜೂ.29: ‘ದಿ ವೈರ್’ನ ಅರ್ಫಾ ಖಾನುಮ್ ಶೆರ್ವಾನಿ ಮತ್ತು ಫಯಾಝ್ ಅಹ್ಮದ್ ವಜೀಹ್ ಪ್ರತಿಷ್ಠಿತ ರೆಡ್ ಇಂಕ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಆರ್ಟ್ ಆಫ್ ಲಿವಿಂಗ್ ಪ್ರತಿಷ್ಠಾನದ ಕುರಿತು ರವಿಶಂಕರ್ ಜೊತೆ ನಡೆಸಿದ ಸಂದರ್ಶನಕ್ಕೆ ರಾಜಕೀಯ (ಟಿವಿ) ವಿಭಾಗದಲ್ಲಿ ಅರ್ಫಾ ಪ್ರಶಸ್ತಿ ಪಡೆದರೆ, ಕಲೆ(ಟಿವಿ) ವಿಭಾಗದಲ್ಲಿ ಉರ್ದುವಿನ ಖ್ಯಾತ ಸಾಹಿತಿಗಳನ್ನು ಒಗ್ಗೂಡಿಸಿದ ಪುಸ್ತಕದ ಮಳಿಗೆಯ ಕುರಿತ ವೀಡಿಯೊಗೆ ವಜೀಹ್ ಪ್ರಶಸ್ತಿ ಪಡೆದಿದ್ದಾರೆ.
ರವಿಶಂಕರ್ ಅಯೋಧ್ಯೆ ಭೂ ವಿವಾದದ ಕುರಿತು 2018ರ ಮಾರ್ಚ್ನಲ್ಲಿ ನೀಡಿದ್ದ ಹೇಳಿಕೆಯನ್ನು ಆಧರಿಸಿ ಅರ್ಫಾ ಸಂದರ್ಶನ ನಡೆಸಿದ್ದರು. ‘ರಾಮಮಂದಿರ ಪ್ರಕರಣ ಇತ್ಯರ್ಥವಾಗದಿದ್ದರೆ ಆಗ ನಾವು ಭಾರತದಲ್ಲಿ ಸಿರಿಯಾವನ್ನು ಹೊಂದಲಿದ್ದೇವೆ’ ಎಂದು ರವಿಶಂಕರ್ ಹೇಳಿದ್ದರು. ಈ ಕುರಿತು ವಿವರಿಸುವಂತೆ ಅರ್ಫಾ ಒತ್ತಾಯಿಸಿದಾಗ ರವಿಶಂಕರ್ರ ತಂಡದ ಸದಸ್ಯರು ಅಡ್ಡಿಪಡಿಸಿದ್ದರು. ಆ ಹಂತಕ್ಕೆ ಸಂದರ್ಶನ ಮುಕ್ತಾಯವಾಗಿತ್ತು.
ವಜೀಹ್ ಅವರ ವರದಿ 88 ವರ್ಷದ ಶಾಹಿದ್ ಅಲಿಖಾನ್ ಅವರಿಗೆ ಉರ್ದು ಸಾಹಿತ್ಯದ ಬಗ್ಗೆ ಇದ್ದ ಅದಮ್ಯ ಉತ್ಸಾಹದ ಕುರಿತಾಗಿದೆ. ‘ಮಕ್ತಬಾ ಜಾಮಿಯಾ’ ಎಂಬ ಪುಸ್ತಕ ಪ್ರಕಟಣೆ ಸಂಸ್ಥೆ ಹಾಗೂ ಪುಸ್ತಕದ ಮಳಿಗೆಯೊಂದಿಗಿನ ಅವರ ಪಯಣ ಅವರನ್ನು 1957ರಲ್ಲಿ ದಿಲ್ಲಿಯಿಂದ ಮುಂಬೈಗೆ ತಲುಪಿಸಿತು. ಅಲ್ಲಿ ಖ್ಯಾತ ಉರ್ದು ಸಾಹಿತಿಗಳಾದ ಸಾಹಿರ್ ಲುಧಿಯಾನ್ವಿ, ಜನ್ ನಿಸಾರ್ ಅಖ್ತರ್, ಮೀನಾ ಕುಮಾರಿ, ಜಗನ್ ನಾಥ್ ಆಝಾದ್ ಮುಂತಾದವರ ಒಡನಾಟ ಬೆಳೆಯಿತು. ಈಗ ಅವರು ದಿಲ್ಲಿಯಲ್ಲಿ ‘ನಯೀ ಕಿತಾಬ್’ ಎಂಬ ಪ್ರಕಟಣಾ ಸಂಸ್ಥೆಯನ್ನು ಹೊಂದಿದ್ದಾರೆ.
‘ದಿ ವೈರ್’ನ ಕಬೀರ್ ಅಗರ್ವಾಲ್, ಜಾಹ್ನವಿ ಸೇನ್ ಹಾಗೂ ಇಷಿತಾ ಮಿಶ್ರ ಅವರೂ ವಿಶೇಷ ಮನ್ನಣೆಗೆ ಪಾತ್ರವಾಗಿದ್ದಾರೆ. ಸ್ವಚ್ಛ ಭಾರತ ಯೋಜನೆ ಮತ್ತು ಉತ್ತರಪ್ರದೇಶದಲ್ಲಿ ಅದರ ಅನುಷ್ಟಾನದ ಬಗ್ಗೆ ನಾಲ್ಕು ಸರಣಿಗಳಲ್ಲಿ ಪ್ರಸಾರವಾದ ಅಗರವಾಲ್ ಅವರ ವರದಿ ಆರೋಗ್ಯ ಮತ್ತು ಕ್ಷೇಮ ವಿಭಾಗದಲ್ಲಿ ಮನ್ನಣೆ ಸ್ವಚ್ಛತಾ ಕಾರ್ಮಿಕರ ಸಮಸ್ಯೆಯನ್ನು ಅರಿತುಕೊಳ್ಳಲು ಹಾಗೂ ಸ್ವಚ್ಛತಾ ಕಾರ್ಮಿಕರ ಪುನರ್ವಸತಿಯ ಬಗ್ಗೆ ಸರಕಾರದ ವೈಫಲ್ಯದ ಬಗ್ಗೆ ಜಾಹ್ನವಿ ಸೇನ್ ಅವರ ವರದಿ ಮಾನವ ಹಕ್ಕು ವಿಭಾಗದಲ್ಲಿ, ಮಾಧ್ಯಮಗಳಲ್ಲಿ ಪ್ರಸಾರವಾಗುವ ವರದಿಗಳ ಬಗ್ಗೆ ನಿಗಾ ಇರಿಸಲು ಬಿಜೆಪಿ ನಡೆಸಿದ ಪ್ರಯತ್ನಗಳ ಕುರಿತು ಇಷಿತಾ ಮಿಶ್ರ ಮಾಡಿದ ವರದಿ ರಾಜಕೀಯ ವಿಭಾಗದಲ್ಲಿ ಮನ್ನಣೆ ಗಳಿಸಿದೆ.
ಪತ್ರಿಕೋದ್ಯಮದಲ್ಲಿ ಉತ್ಕೃಷ್ಟ ಸಾಧನೆ ತೋರುವ ಪತ್ರಕರ್ತರಿಗೆ ಮುಂಬೈ ಪ್ರೆಸ್ ಕ್ಲಬ್ ವಾರ್ಷಿಕವಾಗಿ ರೆಡ್ ಇಂಕ್ ಪ್ರಶಸ್ತಿ ಘೋಷಿಸುತ್ತದೆ. ವರ್ಷದ ಪತ್ರಕರ್ತ ಪ್ರಶಸ್ತಿ ‘ದಿ ಟ್ರಿಬ್ಯೂನ್’ನ ಮಾಜಿ ಪತ್ರಕರ್ತೆ ರಚನಾ ಖೈರಾಗೆ (ಆಧಾರ್ ಕಾರ್ಡ್ ನೀಡುವ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ ಕಾರ್ಯನಿರ್ವಹಣೆಯ ಕುರಿತ ವರದಿ) ಸಂದಿದೆ. ಮಹಾರಾಷ್ಟ್ರ ಟೈಮ್ಸ್ನ ಮಾಜಿ ಪತ್ರಕರ್ತ ದಿನು ರಣದೀವ್ ಹಾಗೂ ಮುಂಬೈ ಮಿರರ್ನ ಮಾಜಿ ಪೋಟೋ ಎಡಿಟರ್ ಸೆಬಾಸ್ಟಿಯನ್ ಡಿ‘ಸೋಜಾ ಜೀವಮಾನ ಸಾಧನೆ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.